ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿ ಕಾಣದ ಪಡಿತರ ಚೀಟಿದಾರರ ಇ ಕೆವೈಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿ ಕಾಣದ ಪಡಿತರ ಚೀಟಿದಾರರ ಇ ಕೆವೈಸಿ

Kadaba Times News

ಕಡಬ ಟೈಮ್, ಪ್ರಮುಖ ಸುದ್ದಿ:  ಕಳೆದ ಕೆಲ ವರ್ಷಗಳಿಂದ ಸರಕಾರವು ಪಡಿತರ ಚೀಟಿದಾರರು ಕೆವೈಸಿ ಮಾಡುವಂತೆ ಸೂಚನೆ ನೀಡುತ್ತಿದ್ದರೂ ಶೇ.100 ರಷ್ಟು ಪ್ರಗತಿ ಕಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿ ಇರುವವರ ಪಟ್ಟಿಯಲ್ಲಿ ಬಂಟ್ವಾಳ ಪ್ರಥಮ ಸ್ಥಾನದಲ್ಲಿದ್ದರೆ, ಬೆಳ್ತಂಗಡಿ ಎರಡನೇ ಸ್ಥಾನ, ಪುತ್ತೂರು ಮೂರನೇ ಸ್ಥಾನದಲ್ಲಿದೆ.



ಜಿಲ್ಲೆಯ 9 ಕಂದಾಯ ತಾಲೂಕಿನಲ್ಲಿ ಒಟ್ಟು 23,351 ಮಂದಿ ಕೆವೈಸಿ ಮಾಡಿಸಲು ಬಾಕಿ ಇದ್ದು ಬಂಟ್ವಾಳ -5786, ಬೆಳ್ತಂಗಡಿ 3938, ಪುತ್ತೂರು- 3382, ಮಂಗಳೂರು-2487, ಮೂಡುಬಿದಿರೆ- 2288, ಕಡಬ-2282,  ಉಳ್ಳಾಲ-1820, ಮೂಲ್ಕಿ-1185, ಸುಳ್ಯ 183 ಮಂದಿಯಿದ್ದಾರೆ. ಪೈಕಿ ಸುಳ್ಯದಲ್ಲಿ ಅತಿ ಕಡಿಮೆ ಮಂದಿ ಕೆವೈಸಿ ಮಾಡಲು ಬಾಕಿಯಾಗಿದ್ದಾರೆ.


ಅಂತಿಮ ಗಡು ಯಾವಾಗ?: ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವ ಕುಟುಂಬದ ಸದಸ್ಯರ ಇ – ಕೆವೈಸಿಗೆ ಕೊನೆಯ ಅವಕಾಶ ನೀಡಲಾಗಿದೆ. ಒಂದು ವೇಳೆ ಸದಸ್ಯರು ಹಾಜರಾಗಿ ಕೆವೈಸಿ ಮಾಡಿಸದಿದ್ದರೆ ಅವರ ಪಾಲಿನ ಪಡಿತರ ಬಂದ್ ಮಾಡಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.  ಪಡಿತರ ಚೀಟಿ ಫಲಾನುಭವಿಗಳ ಪೈಕಿ ಕೆಲವು ಸದಸ್ಯರು ಒಟಿಪಿ ಮೂಲಕ ತಿದ್ದುಪಡಿ ಮಾಡಿದ್ದು, ಸದಸ್ಯರು ಜೀವಂತ ಇರುವ ಬಗ್ಗೆ ಜೀವ ಮಾಪನ ನೀಡಿ ಇ-ಕೈವೈಸಿ ಮಾಡುವುದು ಕಡ್ಡಾಯವಾಗಿದೆ.

 

ಇ ಕೆವೈಸಿ ಮಾಡುವುದು ಹೇಗೆ?: ಪಡಿತರ ಚೀಟಿದಾರರು ಕುಟುಂಬದ ಎಲ್ಲ ಸದಸ್ಯರ ಇ- ಕೆವೈಸಿ ನೀಡುವುದು ಕಡ್ಡಾಯವಾಗಿದೆ.  ಪಡಿತರ ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥ, ಸಂಬಂಧ, ಲಿಂಗ, ಜಾತಿ, ಎಲ್ಪಿಜಿ ವಿವರ, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕಿದ್ದು ಜಿಲ್ಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್ಪಿಜಿ ದಾಖಲೆ, ಜಾತಿ ಪ್ರಮಾಣ ಪತ್ರ (ಇದ್ದಲ್ಲಿ), ಆದಾಯ ಪ್ರಮಾಣ ಪತ್ರ, ಎಂಡೋಸಲ್ಫಾನ್ ಪೀಡಿತರಂತಹ ವಿಶೇಷ ವರ್ಗದವರು ಹೊಂದಿರುವ ದೃಢಪತ್ರಗಳಿದ್ದಲ್ಲಿ ಅವುಗಳೊಂದಿಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಲು ಆಹಾರ ಇಲಾಖೆ ಸೂಚಿಸಿದೆ.


ಇಲ್ಲೆಲ್ಲ ಮಾಡಿಸಬಹುದು : ಅಂತ್ಯೋದಯ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದು, ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿರುವುದಿಲ್ಲ. ಇದನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಮಾಡಬಹುದು. ಇ-ಕೆವೈಸಿ ಸಂಗ್ರಹಣೆಯನ್ನು ಕರ್ನಾಟಕ ಒನ್ ಗ್ರಾಮ ವನ್ ಗಳಲ್ಲಿ ಕೂಡಾ ಮಾಡಲು ಅವಕಾಶ ನೀಡಲಾಗಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top