




ಕಡಬ: ಕಡಬದ ಪಿಜಕ್ಕಳ ದ್ವಾರ ಸಮೀಪದ ಬೈಲಂಗಡಿ ಎಂಬಲ್ಲಿ ಬಾಡಿಗೆ ಮನೆಗೆ ಡಿ.13 ರ ರಾತ್ರಿ ನುಗ್ಗಿದ ಅಪರಿಚಿತರ ತಂಡ ಹಲ್ಲೆಗೆ ಯತ್ನಿಸಿದ್ದು ಮನೆಯೊಳಗಡೆ ಮಲಗಿದ್ದ ಯುವಕ ಪ್ರಾಣ ಉಳಿಸಲು ಹಿಂಬಂದಿಯ ಕಿಟಕಿಯನ್ನು ಸಿನಿಮೀಯ ರೀತಿಯಲ್ಲಿ ಮುರಿದು ಬಳಿಕ ಜಿಗಿದು ನೆರೆಮನೆಗೆ ರಕ್ಷಣೆಗೆ ಓಡಿದ ಘಟನೆ ಶನಿವಾರ ರಾತ್ರಿ 2:30 ರ ಸುಮಾರಿಗೆ ನಡೆದಿತ್ತು.
ಈ ಗಂಭೀರ ಪ್ರಕರಣದ ಮಿನಿ ರೌಡಿಗಳು ಸುಳಿವು ಪತ್ತೆಯಾಗಿರುವ ಮಾಹಿತಿ ಲಭಿಸಿದ್ದು ಕಾಂಗ್ರೆಸ್ ಮುಖಂಡನ ಬೆಂಬಲಿಗರ ತಂಡವಾಗಿದೆ ಎಂಬ ವಿಚಾರ ಬಹಿರಂಗಗೊಂಡಿದೆ. ತನ್ನ ಪ್ರಭಾವ ಬಳಸಿ ಕಟ್ಟಡ ಮಾಲಿಕ ಹಾಗೂ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಜೊತೆ ಗುಪ್ತ ಸ್ಥಳವೊಂದರಲ್ಲಿ ಸುದೀರ್ಘ ಮಾತುಕತೆ ನಡೆಸಿ ಗಂಭೀರ ಪ್ರಕರಣದಂತಿರುವ ಈ ವಿಚಾರ ರಾಜಿಯಲ್ಲಿ ಇತ್ಯಾರ್ಥವಾಗುವ ಹಂತಕ್ಕೆ ತಲುಪಿದೆ.ಈ ಮೂಲಕ ಕಾನೂನು ಸುವ್ಯವಸ್ಥೆ ಕಡಬದಲ್ಲಿ ಹದಗೆಟ್ಟಿದೆ ಎಂಬ ಅಭಿಪ್ರಾಯ ಆ ಭಾಗದ ಸ್ಥಳೀಯ ರಿಂದ ಹಾಗೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ವಿಪರ್ಯಾವೆಂದರೆ ಬಾಡಿಗೆ ಮನೆ ಒಡೆದು ರಾಂಬಾರೊಟ್ಟಿ ಮಾಡಿದ ಪುಡಿ ರೌಡಿಗಳನ್ನು ಭಾನುವಾರ ಪೊಲೀಸರು ಠಾಣೆಗೆ ಕರೆಸದಿರುವುದಕ್ಕೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಸೋಮವಾರ ಎಲ್ಲರನ್ನು ಠಾಣೆಗೆ ಮುಖಂಡನ ನೇತೃತ್ವದಲ್ಲಿ ಕರೆತರಲಾಗುತ್ತಿದೆ ಎಂಬ ಅಂಶ ಲಭಿಸಿದೆ.
ಕಟ್ಟಡ ನಿರ್ಮಾಣ ಕಾರ್ಯದಲ್ಲಿರುವ ರವಿ ಪಾದರೆ ಎಂಬವರ ವಾಹನ ಚಾಲಕರಾಗಿ ದುಡಿಯುತ್ತಿದ್ದ ಮೋಹನ ಎಂಬವರು ಸುಂದರ ಮಂಡೇಕರ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಕೆಲ ತಿಂಗಳಿನಿಂದ ಪಿಜಕ್ಕಳ ಬಳಿ ವಾಸವಾಗಿದ್ದರು. ಶನಿವಾರ ರಾತ್ರಿ 2:30 ರ ಸುಮಾರಿಗೆ ರಬ್ಬರ್ ಟ್ಯಾಂಪಿಗ್ ಮಾಡುವ ವ್ಯಕ್ತಿಗಳನ್ನು ಕೊಲೆ ಮಾಡುವ ಉದ್ದೇಶದಿಂದಲೇ ತಂಡವೊಂದು ಪಿಜಕ್ಕಳ ಭಾಗದಲ್ಲಿ ಹುಟುಕಾಟ ನಡೆಸಿರುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.ಈ ತಂಡ ಗೊಂದಲಗೊಂಡು ಬೈಲಂಗಡಿಯಲ್ಲಿರುವ ಬಾಡಿಗೆ ಮನೆಗೆ ರಾತ್ರಿ ನುಗ್ಗಿದ್ದಾರೆ.
ತಾನು ರಬ್ಬರ್ ಟ್ಯಾಪರ್ ಅಲ್ಲವೆಂದರೂ ಬಾಗಿಲು ಒಡೆದು ಕೋಣೆಯೊಳಗಿದ್ದ ವ್ಯಕ್ತಿಯ ಮೇಲೆ ಸುಮಾರು ಆರು ಜನರ ತಂಡ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಹಿಂಬದಿಯ ಕಿಟಕಿಯನ್ನು ಒಡೆದು ಜೀವ ಕಾಪಾಡಿಕೊಳ್ಳುವ ಸಲುವಾಗಿ ಪಕ್ಕದ ಮನೆಯವರ ಸಹಾಯಪಡೆದು ದಿನ ಕಳೆದಿದ್ದರು.ಈ ನಡುವೆ ತಡ ರಾತ್ರಿ ಠಾಣೆಗೆ ಹೋದರೂ ಮುಂಜಾನೆ ಬರುವಂತೆ ಸೂಚಿಸಿದ್ದರು ಎನ್ನಲಾಗಿತ್ತು. ಬಳಿಕ ಹಲ್ಲೆಗೆ ಒಳಗಾದ ವ್ಯಕ್ತಿ ಕಾರ್ಯ ನಿಮಿತ್ತ ಬೇರೆಡೆ ಹೋಗಿದ್ದರು. ಈ ಬೆಳವಣಿಗೆಯಲ್ಲಿ ಘಟನಾ ಸ್ಥಳಕ್ಕೆ ಕಡಬ ಠಾಣಾ ಎಸ್.ಐ ಅಭಿನಂದನ್ ಅವರು ಮಾಹಿತಿ ಕಲೆ ಹಾಕಿದ್ದರು. ಈ ಸಂದರ್ಭ ದಾಂಧಲೆ ನಡೆಸಿರುವುದು, ಅಲ್ಲದೆ ಕಬ್ಬಿಣದ ಕತ್ತಿಯಂತಹ ಆಯುಧ ಪತ್ತೆಯಾಗಿತ್ತು.
ಮಾಲಕರ ಕಟ್ಟಡದಲ್ಲಿ ಸುದೀರ್ಘ ಮಾತುಕತೆ: ಆರಂಭದಲ್ಲಿ ಕಟ್ಟಡ ಮಾಲಿಕರು ಪೊಲೀಸರು ಕೇಸು ದಾಖಲಿಸಿಕೊಳ್ಳದ ಬಗ್ಗೆ ಆಕ್ರೋಶ ಹೊರಹಾಕಿದ್ದರು.ತಾನು ಸಂಸದರಿಗೂ ಮಾಹಿತಿ ರವಾನಿಸಿರುವುದಾಗಿ ಮಾದ್ಯಮ ಪ್ರತಿನಿಧಿಗಳ ಮುಂದೆ ಹೇಳಿದ್ದರು.ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮುಖಂಡ ತನ್ನ ಕಾರಿನಲ್ಲಿ ಮಾಲಕರ ಕಚೇರಿಗೆ ಬಂದು ಸುದೀರ್ಘ ಮಾತುಕತೆ ಮಾಡಿದ್ದರು. ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಯನ್ನೂ ಪ್ರತ್ಯೇಕವಾಗಿ ಕಾರಲ್ಲಿ ಕರೆ ತಂದು ಮಾತುಕತೆ ಮಾಡಿದ್ದರು.ಹೀಗಾಗಿ ದೂರು ನೀಡಲು ಮುಂದಾಗಿಲ್ಲ ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳು ಮಾದ್ಯಮಕ್ಕೆ ಲಭ್ಯವಾಗಿದೆ.
ಪೊಲೀಸರ ಸ್ವ ನಿರ್ಧಾರ ಯಾಕಿಲ್ಲ? :ಬಿಳಿನೆಲೆಯಲ್ಲಿ ಭೀಕರ ಕೊಲೆ ಪ್ರಕರಣದ ಬಳಿಕ ಜನರು ಪೊಲೀಸರ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.ತಡ ರಾತ್ರಿ ಕೊಲೆ ಯತ್ನದಂತಹ ಘಟನೆಯಿಂದ ಪಿಜಕ್ಕಳ ಭಾಗದ ಆತಂಕಗೊಂಡಿದ್ದಾರೆ . ಅಲ್ಲದೆ ಈ ಕೃತ್ಯಕ್ಕೆ ಸಂಬಂಧಿಸಿದ ಮಿನಿ ರೌಡಿಗಳನ್ನು ವಶಕ್ಕೆ ಪಡೆಯುವ ಬದಲು ಕಾಂಗ್ರೆಸ್ ಮುಖಂಡನ ಅಣತಿಯಂತೆ ಪೊಲೀಸರು ವರ್ತಿಸಿದ್ದಾರೆ ಎಂಬ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.
ಕಟ್ಟಡ ಮಾಲಕರ ಮಗನಿಗೆ ಕೊಲೆ ಬೆದರಿಕೆ: ರಾತ್ರಿಯೇ ಬಾಡಿಗೆ ಮನೆಯ ಮಾಲಕರಿಗೆ ಮಾಹಿತಿ ರವಾನೆಯಾಗಿ ಮಾಲಕರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಯುವಕನಿಗೆ ಕರೆ ಮಾಡಿದಾಗ ಆ ಕರೆಯನ್ನು ಬೇರೆ ವ್ಯಕ್ತಿಗಳು ಸ್ವೀಕರಿಸಿ ಮಾಲಕರಿಗೆ ಬಾಡಿಗೆ ಮನೆ ಕೊಟ್ಟಿರುವುದು ಯಾಕೆ, ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಾಲಕರು ತಿಳಿಸಿದ್ದರು. ಈ ರೀತಿಯ ಕೊಲೆ ಬೆದರಿಕೆಯೂ ರಾಜಿಯಲ್ಲಿ ಮುಕ್ತಾಯವಾಗುತ್ತಿದೆ ಎಂದರೆ ಪೊಲೀಸ್ ಇಲಾಖೆಯ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ದಕ್ಕೆಯಾದಂತೆ ಎಂಬ ಅಭಿಪ್ರಾಯ ಜನರದ್ದಾಗಿದೆ.
ಇಂತಹ ಅಪರಾಧ ಚಟುವಟಿಕೆಗಳು ರಾಜಿಯಲ್ಲೇ ಮುಗಿಯುವುದಾದರೆ ಮತ್ತೆ ಇಂತಹ ಘಟನೆಗಳು ಪುನರಾವರ್ತಿಸುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.