


![]() |
ಘಟನಾ ಸ್ಥಳದ ಚಿತ್ರಗಳು(ಕಡಬ ಟೈಮ್ಸ್) |
ಕಡಬ: ಕಡಬದ ಪಿಜಕ್ಕಳ ದ್ವಾರ ಸಮೀಪದ ಬೈಲಂಗಡಿ ಎಂಬಲ್ಲಿ ಬಾಡಿಗೆ ಮನೆಗೆ ರಾತ್ರಿ ನುಗ್ಗಿದ ಅಪರಿಚಿತರ ತಂಡ ಹಲ್ಲೆಗೆ ಯತ್ನಿಸಿದ್ದು ಮನೆಯೊಳಗಡೆ ಮಲಗಿದ್ದ ಯುವಕ ಪ್ರಾಣ ಉಳಿಸಲು ಹಿಂಬಂದಿಯ ಕಿಟಕಿಯನ್ನು ಸಿನಿಮೀಯ ರೀತಿಯಲ್ಲಿ ಮುರಿದು ಬಳಿಕ ಜಿಗಿದು ನೆರೆಮನೆಗೆ ರಕ್ಷಣೆಗೆ ಓಡಿದ ಘಟನೆ ಶನಿವಾರ ರಾತ್ರಿ 2:30 ರ ಸುಮಾರಿಗೆ ನಡೆದಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರ ನೆರವಿನಿಂದ ರಾತ್ರಿಯೇ ಪೊಲೀಸ್ ಠಾಣೆಗೆ ಹೋಗಿದ್ದು ಘಟನೆ ಸಮರ್ಪಕ ಮಾಹಿತಿ ವಿವರಿಸದ ಹಿನ್ನೆಲೆ ಪೊಲೀಸರು ಮುಂಜಾನೆ ಬರುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಮುಂಜಾನೆ ಪಕ್ಕದ ಮನೆಯಿಂದ ಹೋದ ವ್ಯಕ್ತಿ ಸಾಯಂಕಾಲದವರೆಗೂ ಸಂಪರ್ಕಕ್ಕೆ, ಮಾತುಕತೆಗೆ ಸಿಗದ ಹಿನ್ನಲೆ ಸ್ಥಳೀಯರು ಆತಂಕಗೊಂಡಿದ್ದಾರೆ.
ಈ ಮಧ್ಯೆ ರಾತ್ರಿಯೇ ಬಾಡಿಗೆ ಮನೆಯ ಮಾಲಕರಿಗೆ ಮಾಹಿತಿ ರವಾನೆಯಾಗಿ ಮಾಲಕರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಯುವಕನಿಗೆ ಕರೆ ಮಾಡಿದಾಗ ಆ ಕರೆಯನ್ನು ಬೇರೆ ವ್ಯಕ್ತಿಗಳು ಸ್ವೀಕರಿಸಿ ಮಾಲಕರಿಗೆ ಬಾಡಿಗೆ ಮನೆ ಕೊಟ್ಟಿರುವುದು ಯಾಕೆ, ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಾಲಕರು ತಿಳಿಸಿದ್ದಾರೆ.
ಈ ಘಟನೆಯ ವಿಚಾರದಲ್ಲಿ ಸ್ಥಳೀಯರು ಆತಂಕಗೊಂಡಿದ್ದು ಘಟನೆಯ ಬಳಿಕ ಸಂಜೆಯ ವೇಳೆ ಎಸ್.ಐ. ಅಭಿನಂದನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಸ್ಥಳದಲ್ಲಿ ಕಬ್ಬಿಣದ ಕತ್ತಿಯೊಂದು ಪತ್ತೆಯಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತದೆ.