ಕಡಬದಲ್ಲಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ

ಕಡಬದಲ್ಲಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ

Kadaba Times News

ಕಡಬ ಟೈಮ್, ಸಭೆ ವರದಿ:  ಇಲ್ಲಿನ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ  ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಡಿ. 18ರಂದು   ತಹಶೀಲ್ದಾರ್  ಪ್ರಭಾಕರ ಖಜೂರೆ ಅವರ  ಅಧ್ಯಕ್ಷತೆಯಲ್ಲಿ ನಡೆಯಿತು.  ಪಾಲನಾ ವರದಿ ಕಟ್,  ಅಂಬೇಡ್ಕರ್ ಭವನ ನಿರ್ಮಾಣ  ಸಾರ್ವಜನಿಕ ಶೌಚಾಲಯ ನಿರ್ಮಾಣ, ವೃದ್ದ ದಂಪತಿಗಳ ಮನೆ ಧ್ವಂಸ ಪ್ರಕರಣ, ಮಲೆ ಕುಡಿಯ ಸಮುದಾಯಕ್ಕೆ ಕಳೆಪೆ  ಆಹಾರ ಪೂರೈಕೆ, ಸರ್ಕಾರಿ ಜಾಗದ ಮಾರಾಟ, ಹಲವು ವಿಚಾರ ಚರ್ಚೆಗಳಾದವು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ತಾ.ಪಂ ಇಒ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗವೂ ನಡೆಯಿತು. ಸಭೆಯ ಪೂರ್ಣ ವಿವರ ಇಲ್ಲಿದೆ:




ಅಂಬೇಡ್ಕರ್ ಭವನಕ್ಕೆ ಕೋಡಿಂಬಾಳದಲ್ಲಿ ಜಾಗ, ವಿರೋಧಆರಂಭದಲ್ಲಿ ಪುತ್ತೂರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಅವರು ಸಭೆಗೆ ಪಾಲನಾ ವರದಿ ಮಂಡಿಸಿದರು.  ಹಿಂದಿನ ಸಭೆಯಲ್ಲಿ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ 0.50 ಎಕ್ರೆ ಹತ್ತಿರದ ಸರ್ಕಾರಿ ಜಾಗವನ್ನು ಕಾದಿರಿಸುವಂತೆ ಒತ್ತಾಯಿಸಿದ್ದರು.  ಆದರೆ ಈಗ ಇರುವ ಅಂಬೇಡ್ಕರ್ ಭವನದ ಬಳಿ  ಆಕ್ಷೇಪ ರಹಿತ  ಸರ್ಕಾರಿ ಜಮೀನು ಇಲ್ಲವೆಂದು ತಹಶೀಲ್ದಾರ್  ಹೇಳಿದ್ದರು.  ಹೀಗಾಗಿ ಕೋಡಿಂಬಾಳ ಗ್ರಾಮದಲ್ಲಿ ಸರ್ವೆ ನಂ 243/1 ಎಪಿ2ರಲ್ಲಿ  0.30 ಎಕ್ರೆ ಜಮೀನು ಕಾಯ್ದಿರಿಸಿದ್ದು ಇದಕ್ಕೆ ಸಭೆಯಲ್ಲಿ  ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು , ಮರು ಸರ್ವೆ ಮಾಡಿ ಅಂಬೇಡ್ಕರ್ ಭವನದ ಬಳಿಯೇ ಜಾಗ ಕಾಯ್ದಿರಿಸುವಂತೆ ಒತ್ತಾಯಿಸಲಾಯಿತು.


ಡಿಸಿ ಮನ್ನಾ ಭೂಮಿ ಮತ್ತೊಮ್ಮೆ ಸರ್ವೆ ಮಾಡಿ:  ಕಡಬ ತಾಲೂಕಿನ ಎಲ್ಲಾ ಗ್ರಾಮದಲ್ಲಿ ಡಿಸಿ ಮನ್ನಾ ಭೂಮಿಯ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಸಭೆಯಲ್ಲಿ ಚರ್ಚೆಯಾಗಿ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಮಾಹಿತಿ ನೀಡುವಂತೆ ತಹಶೀಲ್ದಾರ್ ಅವರಿಗೆ ಸಭೆಯಲಿದ್ದ ಮುಖಂಡರು ಸೂಚಿಸಿದರು.  ಅಲ್ಲದೆ  ಪಾಲನಾ ವರದಿಯಂತೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸಗಳನ್ನು ಮಾಡುತ್ತಿಲ್ಲ ಎಂಬ ಆರೋಪವನ್ನು  ವ್ಯಕ್ತಪಡಿಸಿದರು. 


ವೃದ್ದ ದಂಪತಿಗಳ ಮೆನೆ ಧ್ವಂಸ ಪ್ರಕರಣ ಚರ್ಚೆ: ಸಭೆಯ ಆರಂಭದಲ್ಲೇ ಕಾಪಿನಬಾಗಿಲು ವೃದ್ದ ದಂಪತಿಗಳ ಮೆನೆ ಧ್ವಂಸ ಪ್ರಕರಣದ ಬಗ್ಗೆ ಚರ್ಚೆ ಆರಂಭಿಸಿದ ಮುಖಂಡರು ಸಭೆಗೆ ಹಾಜರಾಗದೆ ಪ್ರತಿಭಟಿಸುವ ಮೂಲಕ ಸಭೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೆವು. ಆದರೆ ಪೂರ್ಣ ಪ್ರಮಾಣದ ಮಾಹಿತಿ ಪಡೆಯುವ ಸಲುವಾಗಿ ಹಾಜರಾಗಿದ್ದೇವೆ ಎಂದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅವರು ನ್ಯಾಯಾಲಯದ ಅದೇಶದಂತೆ ಕ್ರಮ ಕೈಗೊಂಡಿದ್ದೆವೆ.  ಆ ಬಡ ಕುಟುಂಬಕ್ಕೆ ಬೇರೆ ಕಡೆ ಜಾಗ ಮಾಡಿಕೊಡುವ ಬಗ್ಗೆ ನಮಗೂ ಮನಸಿತ್ತು, ಆದರೆ ನನ್ನ ಮೇಲೆಯೇ ಲೈಂಗಿಕ ದೌರ್ಜನ್ಯ, ಅಟ್ರಾಸಿಟಿ ಕೇಸು ದಾಖಲಾಗಿದೆ ಎಂದು ಬೇಸರ ತೋಡಿಕೊಂಡರು. ಅಲ್ಲದೆ ಅಲ್ಲಿ ಮತ್ತೆ ಮನೆ ನಿರ್ಮಾಣಕ್ಕೆ ಸಿದ್ದತೆ ನಡೆಸಿದ್ದು ಪರಿಶೀಲನೆಗೆ ತೆರಳಿದ  ವಿಎ ಅವರಿಗೂ ಹಲ್ಲೆ ಮಾಡಲಾಗಿದೆ, 2015 ರ ನಂತರದಲ್ಲಿ ವಾಸ ಇದ್ದವರಿಗೆ 94ಸಿ ಕೊಡಲು ಸಾಧ್ಯವಿಲ್ಲವೆಂದು ಇಬ್ಬರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದರು.   ಸಮಗ್ರ ಚರ್ಚೆಯ ಬಳಿಕ ನ್ಯಾಯಾಂಗ ನಿಂದನೆ ಆಗದಂತೆ ನಾವು ಎಚ್ಚರವಹಿಸಬೇಕೆಂದು ಸಭೆಯಲ್ಲಿದ್ದವರು ಮಾತನಾಡಿ ಚರ್ಚೆಗೆ ತೆರೆ ಎಳೆದರು.


ಸಾರ್ವಜನಿಕ ಶೌಚಾಲಯ ನಿರ್ಮಿಸಿ : ಕೃಷ್ಣ ಎಂಬವರು ಸಭೆಯಲ್ಲಿ  ಕೋಡಿಂಬಾಳದಲ್ಲಿ ಸಾರ್ವಜನಿಕ ಶೌಚಾಲಯದ ಅಗತ್ಯವಿದೆ, ಚರ್ಚ್, ಮಸೀದಿ, ಮಂದಿರಕ್ಕೆ ಬರುವವರಿಗೆ ಅನುಕೂಲವಾಗಲಿದೆ. ಇನ್ನು ಕೋಡಿಂಬಾಳ ಪೇಟೆ ಬಳಿ    ಚರಂಡಿ ನೀರು ಒಂದೆಡೆ ಸೇರಿ ಗಬ್ಬುನಾರುತ್ತಿದೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆಂದು ಹೇಳಿದರಲ್ಲದೆ, ಮಡ್ಯಡ್ಕ ಬಳಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು ಸರಿಯಾದ ಮುಚ್ಚಳ ಅಳವಡಿಸಿಲ್ಲ , ಕೆಲ ವ್ಯಕ್ತಿಗಳು ಬಂದ ಕಾಲಹರಣ ಮಾಡುತ್ತಿದ್ದಾರೆ. ಸಿಸಿ ಟಿವಿ ಅಳವಡಿಸಬೇಕು, ಪೊಲೀಸ್ ಗಸ್ತು ಮಾಡಬೇಕೆಂದು    ಆಗ್ರಹಿಸಿದರು.


ಸಮುದಾಯ ಶೌಚಾಯ ಉದ್ಘಾಟನೆ ಯಾಕಿಲ್ಲ?: ಕೋಡಿಂಬಾಳ ಗ್ರಾಮದ ದಾಸರಗುಡ್ಡೆ ಎಂಬಲ್ಲಿ ಪ.ಪಂ ವತಿಯಿಂದ ನಿರ್ಮಿಸಲಾಗಿರುವ ಸಮುದಾಯ ಶೌಚಾಲಯದ ಕೆಲಸ ಪೂರ್ಣಗೊಂಡಿದೆ. ಇಲ್ಲಿನ ಕಾಲನಿ ನಿವಾಸಿಗಳಿಗೆ ಅಗತ್ಯವಿಲ್ಲದಿದ್ದರೂ ಅನಗತ್ಯವಾಗಿ ನಿರ್ಮಿಸಲಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು. ನಿರೀನ ಸಂಪರ್ಕ ಮಾದಿಲ್ಲ, ಹತ್ತಿರದಲ್ಲಿ ವಿದ್ಯುತ್ ಪರಿವರ್ತಕವಿದ್ದು ಅದನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಯಿತು.   ಇದಕ್ಕೆ ಉತ್ತರಿಸಿದ ಪ.ಪಂ ಮುಖ್ಯಾಧಿಕಾರಿ ಲೀಲಾವತಿಯವರು  ಗುತ್ತಿಗೆ ದಾರರು ಕೆಲಸ ಪೂರ್ಣಗೊಳಿಸಿದ್ದಾರೆ ಆದ್ರೆ ಅನುದಾನ ಬಿಡುಗಡೆಯಾಗಿಲ್ಲ, ಶ್ರೀಘ್ರದಲ್ಲಿ ಉದ್ಘಾಟಿಸಲಾಗುವುದು ಎಂದರು.


ದೇವಸ್ಥಾನದಲ್ಲಿ ಅಸ್ಪೃಶ್ಯತೆ : ಕೊಂಬಾರು ಗ್ರಾಮದ ದೇವಸ್ಥಾನವೊಂದರಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ನಡೆದಿರುವ ವಿಚಾರವನ್ನು ಮುಖಂಡರೊಬ್ಬರು ಅಧಿಕಾರಿಗಳ ಗಮನಕ್ಕೆ ತಂದರು .   ವಿದ್ಯಾವಂತ ಸಮುದಾಯದಲ್ಲೂ ಈ ರೀತಿಯ ನಿಂದನೆ  ಮುಂದುವರಿದರೆ ದೇವಸ್ಥಾನದ  ಆಡಳಿತ ಮಂಡಳಿಯನ್ನು ಹೊಣೆ ಮಾಡಬೇಕಾಗುತ್ತದೆ . ಕೊಂಬಾರು ಗ್ರಾಮ ಮಾತ್ರವಲ್ಲ ಬೇರೆ ಕಡೆಯೂ ಇಂತಹ ಕೀಳು ಮನಸ್ಥಿತಿಯವರು  ಇದ್ದಾರೆ. ಕೇಸು ದಾಖಲಿಸಿ ಅವರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಲು ನಾವು ತಯಾರಿಲ್ಲ, ಆದರೆ  ಇಂತಹ ಕೀಳು ಮನೋಸ್ಥಿತಿ ಬದಲಾಯಿಸಲು  ತಹಶೀಲ್ದಾರ್ ಅವರು ಸೂಕ್ತ ಸಲಹೆ ನೀಡಿ,  ನೋಟಿಸ್ ಮೂಲಕ  ಆಡಳಿತ ಮಂಡಳಿಯನ್ನು ಎಚ್ಚರಿಸಬೇಕೆಂದು ಒತ್ತಾಯಿಸಿದರು.


ಪರಿಶಿಷ್ಟರ ಜಾಗ ಸರ್ವೆ ಮಾಡಿ: ತಾಲೂಕಿನ ಹಲವು ಗ್ರಾಮದ ಕಾಲನಿಗಳಲ್ಲಿ ಹಕ್ಕುಪತ್ರಗಳಿಲ್ಲ, ಇದರಿಂದ ಮನೆ ನಿರ್ಮಾಣ ಸೇರಿದಂತೆ ಇತರ ಯಾವುದೇ ಯೋಜನೆ ಬಂದರೂ ಅದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಿ ದಾಖಲೆ ಮಾಡಿಕೊಡಲು ಮುಂದಾಗಬೇಕೆಂದರು.ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅವರು ಈ ಬಗ್ಗೆ ಮುಂದಿನ ದಿನಗಳಲ್ಲಿ ಗಮನ ಹರಿಸಲಾಗುವುದು ಎಂದರು.


ಆಡಳಿತ ಸೌಧದ ಎದುರು ಅಂಬೇಡ್ಕರ್ ವೃತ್ತ ನಿರ್ಮಿಸಿ:  ಹಲವು ಸರ್ಕಾರಿ ಕಾರ್ಯಕ್ರಮ ಸೇರಿದಂತೆ ಹಕ್ಕೊತ್ತಾಯ, ಪ್ರತಿಭಟನೆಯಂತಹ ಕಾರ್ಯಕ್ರಮಗಳು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿದೆ. ಹೀಗಾಗಿ ಸರ್ಕಾರಿ ಜಾಗವನ್ನು ಪರಿಶೀಲಿಸಿ ಇಲ್ಲಿ  ಅಂಬೇಡ್ಕರ್ ವೃತ್ತ ನಿರ್ಮಿಸಬೇಕೆಂದು ಮುಖಂಡರು ಒತ್ತಾಯಿಸಿದರು.


ಜಿ.ಪಂ, ತಾ.ಪಂ ಅನುದಾನ ಬರುತ್ತಾ, ಕ್ರಿಯಾ ಯೋಜನೆ ಮಾಡುವುದು ಯಾರು?: ಜಿ.ಪಂ ಮತ್ತು ತಾ.ಪಂ ನಿಂದ ಬರುವ ಅನುದಾನದ ಬಗ್ಗೆ ನಮಗೆ ಸರಿಯಾಗಿ ಮಾಹಿತಿ ಇಲ್ಲ ಎಂದು ಬಾಬು ಸವಣೂರು ಅವರು ಪ್ರಸ್ತಾಪಿಸಿದರು,ಅಲ್ಲದೆ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಕ್ರಿಯಾ ಯೋಜನೆ ಮಾಡುವುದು ಯಾರು ಎಂದು ಪ್ರಶ್ನಿಸಿದರು. ಗ್ರಾಮದ ಜನರಿಂದಲೇ ಮಾಹಿತಿ ಪಡೆದು ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ. ಅನುದಾನ ಬರುವ ಬಗ್ಗೆ ಮುಂದೆ ಮಾಹಿತಿ ನೀಡುವ ಭರವಸೆ ನೀಡಿದರು. 


ತಾ.ಪಂ ಇಒ ಬಾಯಿ ಮುಚ್ಚಿಸಿದ  ಮಹಿಳಾ ಅಧಿಕಾರಿ   : ಸಭೆಯಲ್ಲಿ ಜಯ ಪ್ರಕಾಶ್ ಎಂಬವರು ಶಾಲೆಯಿಂದ ಹೊರಗುಳಿದ ಮಗುವಿನ ಬಗ್ಗೆ ಪ್ರಸ್ತಾಪಿಸಿದರು. ಹಲವು ಬಾರಿ ಸಭೆಯಲ್ಲಿ ಪ್ರಸ್ತಾಪಗೊಂಡರೂ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ಹೊರ ಹಾಕಿದರು. ಇದಕ್ಕೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ. ಹಿಂದಿನ ಸಭೆಯ ಪಾಲನಾ ವರದಿಯಲ್ಲಿದ್ದ ಅಂಶ ಈ ಸಭೆಯಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು.  ಇದರ ಬೆನ್ನಲ್ಲೇ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಗಿರಿಜ ನ ಅಭಿವೃದ್ದಿ ಇಲಾಖೆ ಮೂಲಕ ಪೂರೈಸುವ ಅಕ್ಕಿ ಕಳೆಪೆ ಗುಣಮಟ್ಟದಿಂದ ಕೂಡಿದೆ ಎಂದು ಸಭೆಗೆ ಅಕ್ಕಿ ವಿತರಿಸಿದ್ದರು. ಅಕ್ಕಿಯನ್ನು ಗಮನಿಸಿ ಉತ್ತರಿಸಿದ ಅಧಿಕಾರಿಯೊಬ್ಬರು ಇದೊಂದು ಪೌಷ್ಟಿಕ ಅಂಶ ಇರುವ ಅಕ್ಕಿ ,ಬಿಸಿಯೂಟದಲ್ಲೂ ಸೀಮಿತ ಪ್ರಮಾಣದಲ್ಲಿ ಸೇರಿಸಲಾಗುತ್ತದೆ ಎಂದು ವಿವರಿಸಿದರು.ಇದಕ್ಕೆ ಆಕ್ಷೇಪಿಸಿದ ಮುಖಂಡರು ನೀವು ಸಮಜಾಯಿಸಿ ಉತ್ತರಿಸಬೇಡಿ ಎಂದರು.   ಈ ಬಗ್ಗೆ  ಸಭೆಗೆ ಮಾಹಿತಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರು   ಕರ್ತವ್ಯದಲ್ಲಿದ್ದ ಕೃಷ್ಣ ಎಂಬ ಮ್ಯಾನೇಜರ್ ಕಾಲನಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದರು.  ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಮ್ಯಾನೆಜರ್ ಅಲ್ಲಿನ ಜನರಿಗೆ ತಿಳಿಸಿದ್ದರು. ಆದ್ರೆ ಮೇಲಾಧಿಕಾರಿಗಳಿಗೆ ಮಹಜ ರು ವರದಿ ಕೊಡಲಿಲ್ಲ  ಎಂಬುದನ್ನು  ಉಲ್ಲೇಖಿಸಿದಲ್ಲದೆ,  ಪಾಲನಾ ವರದಿಯಲ್ಲಿನ ಕೆಲವು ಪ್ರಮುಖ ಅಂಶಗಳನ್ನು ಅಲಿಸಿ ಹಾಕಿರುವುದು,  ಒಂದು ವರ್ಷವಾದರೂ ಕುಂದು ಕೊರತೆ ಸಭೆ ಮಾಡದಿರುವುದು,  ಹಿಂದಿನ ಅಧಿಕಾರಿಯ  ಅವಧಿಯಲ್ಲಿ ಕೆಲವು ಅವ್ಯವಹಾರ ಆಗಿರುವ ಬಗ್ಗೆ ಸಭೆಗೆ ಸುಳಿವು ನೀಡಿದರು.   

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ತಾ.ಪಂ ಇಒ ನವೀನ್ ಭಂಡಾರಿ ಅವರು  ಇದನ್ನು ಮೇಲಾಧಿಕಾರಿಗಳ ಬಳಿ ಚರ್ಚಿಸಿ ಈ ಸಭೆಯಲ್ಲಿ ಬೇಡವೆಂದರು.  ಈ ವೇಳೆ ಮಧ್ಯ ಪ್ರವೇಶಿಸಿದ ಕೆಲ ಮುಖಂಡರು ದಕ್ಷ ಮಹಿಳಾ ಅಧಿಕಾರಿ ಇದ್ದ ವಿಷಯವನ್ನು ಸಭೆಯಲ್ಲಿ ತಿಳಿಸಿದರೆ ಏನು ತಪ್ಪು?,  ಬ್ರಷ್ಟ ಅಧಿಕಾರಿಗೆ ಬೆಂಬಲ ಕೊಡುವುದು ಕಾನೂನಿನಲ್ಲಿ ಅಪರಾಧವೆಂದು ಇಒ ಅವರನ್ನು ತರಾಟೆಗೆ ತೆಗೆದುಕೊಂಡರು.   ಇದಕ್ಕೆ ಪೂರಕವಾಗಿ ಮಾತನಾಡಿದ ಶಶಿಧರ ಬೊಟ್ಟಡ್ಕ ಅವರು  ಸಭೆಯಲ್ಲಿ ತಾ.ಪಂ ಇಒ ಅವರು  ಈ ರೀತಿ ನಮ್ಮ ಮೇಲೆ ಮುಗಿಬೀಳುತ್ತಿರುವುದು ಎರಡನೇ ಸಲ ಎಂದರು , ಜೊತೆಗೆ  ವಸಂತ ಕುಬುಲಾಡಿ ಅವರು ಹಕ್ಕು ಪತ್ರ  ದಾಖಲೆಯೊಂದನ್ನು ತೋರಿಸಿ ಐತ್ತೂರು ಗ್ರಾ.ಪಂ ನಲ್ಲಿ ಹಕ್ಕು ಪತ್ರ ನೀಡಿದ ಜಾಗವನ್ನು ಮಾರಿದ್ದು ಯಾರು ಎಂದು ಇಒ ಅವರನ್ನು ಪ್ರಶ್ನಿಸಿದರು.  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ತಾನು ಅಧಿಕಾರ ವಹಿಸಿಕೊಳ್ಳುವ ಮುನ್ನ ಅಧಿಕಾರದಲ್ಲಿದ್ದ ಅಧಿಕಾರಿಯ ನ್ಯೂನ್ಯತೆಗಳನ್ನು ವಿವರವಾಗಿ ತಿಳಿಸಿದರು, ನಾನು ಯಾವುದೇ ಅಧಿಕಾರಿಗೂ, ಜನಪ್ರತಿನಿಧಿಗೂ  ಎದರುವ ಪ್ರಮೇಯವೇ ಇಲ್ಲ ಎಂದರು. ದಿಕ್ಕು ತೋಚದ ತಾ.ಪಂ ಇಒ ಮೌನಕ್ಕೆ ಶರಣಾದ್ದರು. 

  

 ಸಭೆಯಲ್ಲಿ   ವಿವಿಧ ಇಲಾಖೆಗಳ ಅಧಿಕಾರಿಗಳು,  ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು, ಗ್ರಾಮಕರಣಿಕರು ಹಾಜರಿದ್ದರು. 



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top