


ಕಡಬ ಟೈಮ್ಸ್, ಸವಣೂರು: ಮದ್ಯರಾತ್ರಿ ವಾಹನ ಕೆಟ್ಟು ಹೋದ ಕಾರಣ ಆತಂಕದಲ್ಲಿದ್ದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಮಾಲೆಧಾರಿಗಳಿಗೆ ಮುಸ್ಲಿಂ ಸಮುದಾಯದ ಯುವಕರು ಮಸೀದಿಯಲ್ಲಿ ಆಸರೆ ಕಲ್ಪಿಸಿ ಮಾನವೀಯತೆ ತೋರಿದ ಘಟನೆ ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ.
![]() |
ಅಯ್ಯಪ್ಪ ಮಾಲೆಧಾರಿಗಳ ಜೊತೆಗೆ ಸವಣೂರಿನ ಮುಸ್ಲಿಂ ಯುವಕರು |
ಹೈದರಾಬಾದಿನಿಂದ ಹೊರಟಿದ್ದ ಅಯ್ಯಪ್ಪ ವೃತಧಾರಿಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಂದರ್ಶಿಸಿ ಶಬರಿಮಲೆಗೆ ಹೊರಟಿದ್ದರು. ಆದರೆ ಅವರು ಸಂಚರಿಸುತ್ತಿದ್ದ ವಾಹನ ಮಧ್ಯರಾತ್ರಿ 1ರ ಸುಮಾರಿಗೆ ಸವಣೂರು- ಚಾಪಳ್ಳ ಮಸೀದಿಯ ಬಳಿ ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿತು.
ರಾತ್ರಿ ಕೆಟ್ಟು ಹೋದ ವಾಹನದ ಬಳಿಯೇ ಅಯ್ಯಪ್ಪ ವೃತಧಾರಿಗಳು ಮುಂಜಾನೆಯವರೆಗೆ ಸಮಯ ಕಳೆದ್ದರು. ಮುಂಜಾನೆ ನಮಾಜ್ ಗಾಗಿ ಬಂದ ಮುಸ್ಲಿಂ ಸಮುದಾಯದ ಯುವಕರು ವಾಹನದಲ್ಲಿದ್ದವರು ಪರದಾಡುವುದನ್ನು ಕಂಡು ವಿಚಾರಿಸಿದ್ದರು. ಬಳಿಕನಮಾಜ್ ಮುಗಿಸಿ ಬಂದ ಯುವಕರು ಅವರಿಗೆ ನೆರವಿಗೆ ಧಾವಿಸಿ ಮಸೀದಿ ಮತ್ತು ಪಂಚಾಯತ್ ನ ಬಾತ್ ರೂಂಗಳಲ್ಲಿ ನಿತ್ಯ ಕರ್ಮಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ. ಅಲ್ಲದೆ ಮೊಬೈಲ್ ಚಾರ್ಜ್ ಮಾಡಲು ಮಸೀದಿಯಲ್ಲಿ ಅನುವು ಮಾಡಿಕೊಟ್ಟು ,ವಾಹನ ರಿಪೇರಿಗೆ ಮೆಕ್ಯಾನಿಕ್ ನನ್ನು ಕರೆಸಿ ವಾಹನ ಸರಿಪಡಿಸಿ ಕಳುಹಿಸಿಕೊಟ್ಟಿದ್ದಾರೆ.
ಸವಣೂರು ಗ್ರಾ.ಪಂ.ಸದಸ್ಯ ಎಂ.ಎ.ರಫೀಕ್,ಬಿ.ಎಂ.ಮಹಮ್ಮದ್, ರಫೀಕ್ ಹಾಜಿ ಆರ್ತಿಕೆರೆ,ಇಕ್ಬಾಲ್ ಕೆನರಾ,ಕರೀಂ ಸಮಹಾದಿ, ಜಗನ್ನಾಥ ಅಲ್ಲದೆ ಸ್ಥಳೀಯ ಅಯ್ಯಪ್ಪ ಮಾಲಾಧಾರಿ ಸ್ವಾಮಿ , ಅನ್ಯಾಡಿಯ ಮೆಕ್ಯಾನಿಕ್ ಹಿಂದೂ ಸಹೋದರರೊಬ್ಬರು ಸಹಕರಿಸಿದ್ದಾರೆ. ಜಿಲ್ಲೆಯ ಹಲವಡೆ ಕೋಮು ಕಿಚ್ಚು ಹಚ್ಚುವ ಸುದ್ದಿಗಳ ನಡುವೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಘಟನೆಗಳು ಸೌಹಾರ್ದ ಕ್ಕೆ ಸಾಕ್ಷಿಯಾಗಿವೆ.