


ಕಡಬ: ಐತ್ತೂರು ಗ್ರಾಮದ ಶಿವಾಜಿನಗರ ನಿವಾಸಿ ಅಹ್ಮದ್ ಕುಂಞ ಎಂಬವರ ಪುತ್ರ ಮಹಮ್ಮದ್ ಆಸಿಫ್ ಇವರು ಶಾಶ್ವತ ವಿಕಲಚೇತನರಾಗಿದ್ದು ಇವರಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಈ ಹಿಂದೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು.
ಮನವಿಗೆ ಸ್ಪಂಧಿಸಿ ಯುವಕನಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಜಿಲ್ಲಾಧಿಕಾರಿಯವರು ಆಧಾರ್ ನಿರ್ದೇಶನ ನೀಡಿದರೂ ಇದುವರೆಗೆ ಆಧಾರ್ ಕಾರ್ಡ್ ಆಗದ ಹಿನ್ನಲೆಯಲ್ಲಿ ಕಡಬ ತಾಲೂಕು ಕಛೇರಿ ಎದುರಿನಲ್ಲಿ ಪ್ರತಿಭಟನೆ ಮಾಡಲು ಸಿದ್ದತೆ ಮಾಡಲಾಗಿತ್ತು.
ನಂತರದ ಬೆಳವಣಿಗೆಯಲ್ಲಿ ವಿಕಲಚೇತನ ಯುವಕ ಹಾಗೂ ಆತನ ತಾಯಿ ಸಹಿತ ಐತ್ತೂರು ಗ್ರಾ.ಪಂ. ಸದಸ್ಯ ಮನಮೋಹನ್ ಗೊಳ್ಯಾಡಿಯವರ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರಿಗೆ ಕಡಬ ತಾಲೂಕು ಕಛೇರಿಯ ಮೂಲಕ ಮನವಿ ಸಲ್ಲಿಲಿಸಿದ್ದಾರೆ.
ಶಾಶ್ವತ ಅಂಗವಿಕಲ ಹೊಂದಿ ಪೂರ್ಣ ಪ್ರಮಾಣದಲ್ಲಿ ಮಲಗಿದಲ್ಲೇ ಇರುವ ಮಹಮ್ಮದ್ ಆಸಿಫ್ ಅವರಿಗೆ ಸರಕಾರಿ ಸವಲತ್ತು ಪಡೆಯಲು ಹಲವಾರು ಬಾರಿ ಆಧಾರ್ ನೋಂದಣಿ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಇದರಿಂದ ಅವರು ಪಡಿತರ ಚೀಟಿ ವಂಚಿತರಾಗಿದ್ದು ಈ ಬಗ್ಗೆ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಯವರಿಗೆ ನೀಡಿದ ಮನವಿಯಂತೆ ಜಿಲ್ಲಾಧಿಕಾರಿಗಳು ಕೂಡಲೇ ಆಧಾರ್ ನೋಂದಣಿ ಮಾಡಿಕೊಡುವಂತೆ ಜಿಲ್ಲಾ ಆಧಾರ್ ಸೇವಾ ಕೇಂದ್ರದವರಿಗೆ ನಿರ್ದೇಶನ ನೀಡಿದ್ದರೂ ಇದುವರೆಗೆ ಆಧಾರ್ ಮಾಡಿಸಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಈ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಕಡಬ ಟೈಮ್ ಗೆ ಪ್ರತಿಕ್ರಿಯೆ ನೀಡಿರುವ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಆಧಾರ್ ಕಾರ್ಡ್ ವಂಚಿತ ವಿಶೇಷ ಚೇತನರನ್ನು ವಾಹನದ ವ್ಯವಸ್ಥೆ ಕಲ್ಪಿಸಿ ಕರೆತಂದು ಆಧಾರ್ ಪ್ರಕ್ರಿಯೆ ಮಾಡಲು ಕಡಬ ತಹಶಿಲ್ದಾರ್ ರವರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.