




ಕಡಬ: ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ (ರಿ)ಇದರ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮವು ಪ.ಪಂ ಸಭಾಂಗಣದಲ್ಲಿ ನ.24 ರಂದು ನಡೆಯಿತು.
ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬಳೆಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಡಬ ಠಾಣಾ ತನಿಖಾ ವಿಭಾಗದ ಉಪನಿರೀಕ್ಷಕ ಅಕ್ಷಯ ಡವಗಿ ಅವರು ಸಂಘಟನೆಗಳು ಹೋರಾಟದ ಜೊತೆಗೆ ಸಮುದಾಯದ ಜನರಿಗೆ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಾಗಲು ಪೂರಕ ವಾತಾವರಣ ನಿರ್ಮಿಸಬೇಕೆಂದರು .
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಜಯಕುಮಾರ್ ಹಾದಿಗೆ ದಿಕ್ಸೂಚಿ ಭಾಷಣ ಮಾಡಿ ಕರಾವಳಿ ಭಾಗದಲ್ಲಿ ನೀಲಿಪಡೆಗಳ ಹೆಜ್ಜೆ ಗುರುತುಗಳು ಹೆಚ್ಚಾಗುತ್ತಿದೆ, ಸತ್ಯ ನ್ಯಾಯಕ್ಕಾಗಿ ಅನ್ಯಾಯಕ್ಕೆ ಒಳಗಾದವರ ಧ್ವನಿಯಾಗಿ ಸಂವಿಧಾನಿಕ ಹಕ್ಕನ್ನು ಕೇಳಲು ನಾವು ಹಿಂಜರಿಯಬಾರದು ಎಂದರು.
ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆಯುಷ್ಮಾನ್ ಮತೀನ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯ ಕಟ್ಟುವುದು ದೊಡ್ಡ ವಿಷಯವಲ್ಲ ನಮ್ಮಲ್ಲಿ ದೂರದೃಷ್ಟಿತ್ವ ಇರಬೇಕು, ಪರಿಪೂರ್ಣ ಜ್ಞಾನ ಪಡೆದುಕೊಂಡು ಹೋರಾಟಕ್ಕೆ ಮುಂದಾಗಬೇಕು . ಸಮುದಾಯದ ಮೇಲೆ ದಬ್ಬಾಳಿಕೆ ,ದೌರ್ಜನ್ಯ ನಡೆದಾಗ ದಲಿತರನ್ನೇ ಎತ್ತಿಕಟ್ಟಿ ಧಮನಿಸುವ ಪ್ರಯತ್ನಗಳು ನಡೆಯುತ್ತವೆ ಈ ಬಗ್ಗೆ ತಿಳಿದುಕೊಂಡು ಖಂಡಿಸುವ ಎದೆಗಾರಿಕೆ ನಮ್ಮಲ್ಲಿರಬೇಕೆಂದರು.
ಹಾಸನ ಜಿಲ್ಲಾಧ್ಯಕ್ಷ ಪ್ರದೀಪ್ ಹೆಚ್.ಎಸ್ ಅಥಿತಿ ನೆಲೆಯಲ್ಲಿ ಮಾತನಾಡಿ ನಮ್ಮಲ್ಲಿ ಅರಿವಿನ ಕೊರತೆ ಇದೆ, ಸಾಮಾಜಿಕ ಶಿಕ್ಷಣ ಪಡೆದು ಸಂಘಟನೆಯಲ್ಲಿ ಸಕ್ರಿಯಾವಾಗಿ ತೊಡಗಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದರು.
ದ.ಕ ಜಿಲ್ಲಾಧ್ಯಕ್ಷ ವಿವೇಕಾನಂದ ಶಿರ್ತಾಡಿ, ಹಾಸನ ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ಹಾಸನ ತಾಲೂಕು ಅಧ್ಯಕ್ಷ ಹೇಮಂತ್ ಡಿ.ಕೆ, ಶಿಕ್ಷಕ ಶೇಖರ್ ಅತ್ನಿ, ಸುಳ್ಯ ತಾಲೂಕು ಅಧ್ಯಕ್ಷ ವಸಂತ್ ಕುದ್ದಾಜೆ, ಅಲೂರು ತಾಲೂಕು ಅಧ್ಯಕ್ಷ ಜಗದೀಶ್ ನಿಡನೂರು, ಧರ್ಮ ಪ್ರಚಾರಕ ದಿನೇಶ್ ಮುಳೂರು, ದಕ್ಷಿಣ ಕರ್ನಾಟಕ ಅಧ್ಯಕ್ಷ ಗಿರೀಶ್ ಕೆ.ಬಿ ವೇದಿಕೆಯಲ್ಲಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ: ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ತಾರಾನಾಥ ಕಡಿರಡ್ಕ ಉಪಾಧ್ಯಕ್ಷರಾಗಿ ಸುರೇಶ ತೋಟಂತಿಲ , ಕಾರ್ಯದರ್ಶಿಯಾಗಿ ಸುಂದರ ಪುರುಷಬೆಟ್ಟು, ಸಂಚಾಲಕರಾಗಿ ದಯಾನಂದ ಕಡಿರಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ ಕಡಿರಡ್ಕ, ಕೋಶಾಧಿಕಾರಿಯಾಗಿ ಯೋಗೀಶ್ ಕಡಿರಡ್ಕ, ಕಾರ್ಯದರ್ಶಿಯಾಗಿ ಮೋಹನ್ ಉಜುರ್ಲಿ ಇವರನ್ನು ಆಯ್ಕೆ ಮಾಡಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆದೇಶಪತ್ರ ನೀಡಿದರು. ರಾಘವ ಕಳಾರಾವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ತನಿಯಪ್ಪ ಬೆದ್ರೋಳಿ ಅವರನ್ನು ಸನ್ಮಾನಿಸಲಾಯಿತು. ಕಡಬ ಭೀಮ್ ಆರ್ಮಿ ಘಟಕದ ಅದ್ಯಕ್ಷ ರಾಘವ ಕಳಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಲತಾ .ಡಿ ಮತ್ತು ಸುಪ್ರಿತಾ ಡಿ ಅವರು ಸಂವಿಧಾನ ಪೀಠಿಕೆ ಓದಿದರು. ವಿ.ಕೆ ಕಡಬ ಸ್ವಾಗತಿಸಿ ಮಹಾಬಲ ಪಟುಬೆಟ್ಟು ಧನ್ಯವಾದ ವಿತ್ತರು. ಸಂದೀಪ್ ಪಾಂಜೋಡಿ ನಿರೂಪಿಸಿದರು.