




ಕಡಬ: ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿನ ಮನೆಯೊಂದಕ್ಕೆ ಶಂಕಿತ ನಕ್ಸಲರ ತಂಡವೊಂದು ಆಗಮಿಸಿ ಊಟ, ಮಾಡಿ ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿರುವ ಸುದ್ದಿ ಹಬ್ಬಿತ್ತು. ಲೋಕಸಭೆ ಚುನಾವಣೆ ಸನಿಹದಲ್ಲಿ ಎಲ್ಲೆಡೆ ಹೆಚ್ಚುವರಿ ಭದ್ರತೆ ಇದ್ದುದರಿಂದ ದಕ್ಷಿಣ ಕನ್ನಡ, ಕೊಡಗು ಗಡಿಭಾಗ ಕೂಜುಮಲೆ, ಕಡಮಕಲ್ಲು , ಸುಬ್ರಹ್ಮಣ್ಯ, ಬಿಳಿನೆಲೆ ಭಾಗದಲ್ಲಿ ಹೆಚ್ಚಿನ ದಿನಗಳನ್ನು ನಕ್ಸಲರು ಕಳೆದಿದ್ದರು.
ಇದೀಗ ಕಾಡಿನಲ್ಲಿಯೇ ಸುತ್ತಾಡುವ ನಕ್ಸಲರು ಕೆಲವು ಸಮಯದ ಹಿಂದೆ ರೈಲಿನ ಮೂಲಕ ಪ್ರಯಾಣಿಸಿದ್ದರು ಎಂಬ ಮಾಹಿತಿ ಈಗ ಹೊರಗೆ ಬಿದ್ದಿದೆ. ಎನ್ಕೌಂಟರ್ ಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡ ಮತ್ತು ತಂಡ ಸುಬ್ರಹ್ಮಣ್ಯದಿಂದ ಮುರ್ಡೇಶ್ವರ ವರೆಗೆ ರೈಲಿನಲ್ಲಿ ಹೋಗಿ ಅನಂತರ ಕಾಡು ಹಾದಿ ಹಿಡಿದಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ಇಳಿದು ಕಾಡು ಹತ್ತಿದ್ದ ಅವರು ಕೊಲ್ಲೂರು ಭಾಗದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರು ಕಾಡು ದಾರಿಯಾಗಿ ಕಾರ್ಕಳ, ಹೆಬ್ರಿ ಭಾಗಕ್ಕೆ ಬಂದಿದ್ದರು. ಪೀತಬೈಲಿನಲ್ಲಿ ವಿಕ್ರಂ ಗೌಡನ ಎನ್ಕೌಂಟರ್ ಆಗುವ ಕೆಲವು ದಿನಗಳ ಹಿಂದೆಯಷ್ಟೆ ಈದುವಿನಲ್ಲಿ ಕಾಣಿಸಿಕೊಂಡಿದ್ದರು. ನಕ್ಸಲರು ರೈಲಿನಲ್ಲಿ ಪ್ರಯಾಣಿಸುವಾಗ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ಯಾರಿಗೂ ತಿಳಿಯದಂತೆ ಗೌಪ್ಯತೆ ಕಾಪಾಡಿಕೊಂಡಿದ್ದರು ಎಂದು ತನಿಖೆ ವೇಳೆ ಮಾಹಿತಿ ಸಿಕ್ಕಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕೇರಳದಲ್ಲಿ ವಿಕ್ರಂ ಹಾಗೂ ಈ ಏಳು ಮಂದಿ ನಕ್ಸಲರ ತಂಡ ಸಕ್ರಿಯವಾಗಿತ್ತು. ಇವರು ಹಾಗೂ ಕೇರಳ ನಕ್ಸಲ್ ನಾಯಕ ಸಂಯೋಯ್ ದೀಪಕ್, ಮೊಹಿಯುದ್ದೀನ್ ಅವರ ತಂಡಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅವರೊಳಗೆ ಸಂಘಟನೆ, ಹಣಕಾಸಿನ ವಿಚಾರದಲ್ಲಿ ಜಗಳ ನಡೆದಿತ್ತು. ವಿಕ್ರಂ ಗೌಡ ಮತ್ತವರ ತಂಡ ಸಂಯೋಯ್ ತಂಡದಿಂದ 1 ಲಕ್ಷ ರೂ. ಪಡೆದುಕೊಂಡಿತ್ತು. ಇದೇ ವಿಷಯದಲ್ಲಿ ತಗಾದೆಯೂ ಉಂಟಾಗಿತ್ತು
ಹೀಗಾಗಿ ಅಸಮಾಧಾನಗೊಂಡು ವಿಕ್ರಂ ಗೌಡ ನಾಯಕತ್ವದ ಎಂಟು ಮಂದಿ ಕೊಡಗಿನ ಗಾಳಿಬೀಡು, ಕರಿಕೆ ಮಾರ್ಗವಾಗಿ ಕೊಡಗು- ದ.ಕ. ಗಡಿಭಾಗ ಪುಷ್ಪಗಿರಿ ತಪ್ಪಲಿನ ಕಡೆಗೆ ಬಂದಿಳಿದು ಕೂಜುಮಲೆ, ಸುಬ್ರಹ್ಮಣ್ಯ ಬಿಳಿನೆಲೆ ಭಾಗದಲ್ಲಿ ಓಡಾಟ ನಡೆಸಿದ್ದರು. ಈ ಭಾಗದಲ್ಲಿ ಆಶ್ರಯ ಪಡೆದು ಸಂಘಟನೆಯನ್ನು ಬಲಪಡಿಸುವ ಉದ್ದೇಶ ಹೊಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.