




ಕೊಕ್ಕಡ/ಶಿಶಿಲ: ಶಾಲಾ ಮಕ್ಕಳನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ರಸ್ತೆ ತಿರುವಿನಲ್ಲಿ ಕಾಡಾನೆ ಎದುರುಗೊಂಡಿದ್ದು ಅಪಾಯ ತಪ್ಪಿಸಲು ಹೋಗಿ ಮೂವರು ಗಾಯಗೊಂಡು ಮನೆ ಸೇರಿದ ಘಟನೆ ನ.21 ರ ಮುಂಜಾನೆ ಶಿಶಿಲ ಗ್ರಾಮದಿಂದ ವರದಿಯಾಗಿದೆ.
ಕಳ್ಳಾಜೆ ನಿವಾಸಿ ವಸಂತ ಗೌಡ
ಎಂಬವರು ತನ್ನ ಮಕ್ಕಳನ್ನು
ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಬಿಡಲು ಹೋಗುತ್ತಿದ್ದಾಗ ಮಾರ್ಗ ತಿರುವಿನ ಮಧ್ಯೆ ಒಂಟಿ ಸಲಗವೊಂದು ಪ್ರತ್ಯಕ್ಷಗೊಂಡಿದೆ. ಭಯದಿಂದ ತನ್ನ ಬೈಕನ್ನು ನಿಲ್ಲಿಸಿದಾಗ ಬೈಕಿಂದ ಬಿದ್ದ
ಸವಾರ ಮತ್ತು ಅವರ ಇಬ್ಬರು ಮಕ್ಕಳ ಮೊಣಕಾಲು ಮತ್ತು ಕೈ ಗಳಿಗೆ ಗಾಯಗಳಾಗಿವೆ.
ಇನ್ನು ವಾಹನ ಬಿಟ್ಟು
ಜೀವ ರಕ್ಷಣೆಗಾಗಿ ಓಡುತ್ತಿದ್ದಂತೆಯೇ ಬೈಕ್ ಕಡೆಗೆ ಆಗಮಿಸಿದ ಒಂಟಿ ಸಲಗ ಬೈಕ್ ಅನ್ನು ಸೊಂಡಿಲಿನಿಂದ ಕೆಡವಿ ಕಾಲಿನಿಂದ ತುಳಿದು ಸಂಪೂರ್ಣ ಹಾನಿ ಗೊಳಿಸಿರುವುದಾಗಿ
ತಿಳಿದು ಬಂದಿದೆ.
ಕೂಡಲೇ ಅರಣ್ಯ ಇಲಾಖೆಯವರು ಆಗಮಿಸಿ ಆನೆಯನ್ನು ಓಡಿಸಬೇಕು,ಅಥವಾ
ಶಾಲಾಮಕ್ಕಳನ್ನು ಕರೆದೊಯ್ಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.