


ಕಡಬ ಟೈಮ್ಸ್, ಸುಳ್ಯ: ಮೈಸೂರು ಪೊಲೀಸರು ಬಂಧಿತ ಆರೋಪಿಯನ್ನು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ವೇಳೆ ಸುಳ್ಯ ಸಮೀಪ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಆರೋಪಿಯನ್ನು ಊರಿನವರ ಸಹಾಯದಿಂದ ಮತ್ತೆ ಪೊಲೀಸರು ವಶಪಡಿಸಿಕೊಂಡ ಘಟನೆ ರವಿವಾರ ಸಂಜೆ ನಡೆದಿದೆ.
ಬ್ಯಾಂಕ್ ಖಾತೆ ಹ್ಯಾಕ್ ಮತ್ತು ಕೋಟ್ಯಂತರ ರೂ. ವಂಚನೆ ಪ್ರಕರಣದ ಆರೋಪಿಯನ್ನು ಮೈಸೂರು ಕ್ರೈಂ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಸುಳ್ಯ ಮಾರ್ಗವಾಗಿ ಪೊಲೀಸರು ತೆರಳುತ್ತಿದ್ದ ಸಂದರ್ಭ ಓಡಬಾಯಿ ಸಮೀಪ ಚಹಾ ಕುಡಿಯಲು ನಿಲ್ಲಿಸಿದ್ದು ಈ ವೇಳೆ ಆರೋಪಿ ಕೂಡ ಇವರೊಂದಿಗೆ ಉಪಹಾರ ಸೇವಿಸಿ ಕೈತೊಳೆಯಲು ಹೋಗಿ ಅಲ್ಲಿಂದ ತಪ್ಪಿಸಿಕೊಂಡಿದ್ದ ಎಂದ ತಿಳಿದುಬಂದಿದೆ.
ಇದನ್ನು ನೋಡಿದ ಸ್ಥಳೀಯರು ಜೋರಾಗಿ ಕಿರುಚಿಕೊಂಡಿದ್ದು, ಈ ವೇಳೆ ಆತ ಹೋಟೆಲ್ನ ಹಿಂದೆ ಇದ್ದ ಪಯಸ್ವಿನಿ ನದಿಗೆ ಹಾರಿ ದೊಡ್ಡೇರಿ ಕಡೆಗೆ ಓಡಿದ್ದ. ದೊಡ್ಡೇರಿಯ ಮನೆಯೊಂದರ ಸಮೀಪ ತಲುಪಿದಾಗ ಆರೋಪಿ ಧರಿಸಿದ ಬಟ್ಟೆಯಲ್ಲಿ ಕೆಸರು ನೀರು ಆಗಿರುವುದನ್ನು ಕಂಡು ಸಮೀಪದ ಮನೆಯವರಿಗೆ ಆತನ ಬಗ್ಗೆ ಸಂಶಯ ಬಂದಿದೆ.
ಆತನನ್ನು
ಕೆಲವು ಯುವಕರು ಹಿಡಿದು ವಿಚಾರಿಸಿದಾಗ ಪೊಲೀಸರಿಂದ ತಪ್ಪಿಸಿಕೊಂಡ ವಿಚಾರ ಬೆಳಕಿಗೆ ಬಂದಿದ್ದು, ಇದೇ ವೇಳೆ ಮೈಸೂರು ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.