



ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ದೇಗುಲದಲ್ಲಿ ಸಿಬ್ಬಂದಿಗಳಿಬ್ಬರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮಕ್ಕೆ ಮುಂದಾದ ಘಟನೆ ನಡೆದಿದೆ.
ಇತ್ತೀಚೆಗೆ ಖಾಸಗಿ ನೆಲೆಯಲ್ಲಿ ವಸತಿಗೃಹ ನೋಡಿಕೊಳ್ಳುವ ಜವಾಬ್ದಾರಿಯಲ್ಲಿದ್ದ ಸಿಬ್ಬಂದಿಯೊಬ್ಬರು ಪಾನಮತ್ತರಾಗಿ ಕರ್ತವ್ಯದಲ್ಲಿರುವುದನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆದೊಯ್ದು ಪರಿಶೀಲಿಸಲಾಗಿದೆ. ಹೀಗಾಗಿ ಮದ್ಯ ಸೇವಿಸಿರುವುದು ದೃಡ ಪಟ್ಟಿದ್ದು ಸೇವೆಯಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿದು ಬಂದಿದೆ.
ಮತ್ತೊಂದು ಘಟನೆಯಲ್ಲಿ ಖಾಯಂ ಗೊಂಡ ನೌಕರರೊಬ್ಬರು ಮದ್ಯ ಸೇವಿಸಿ ಕರ್ತವ್ಯಕ್ಕೆ ಬಂದಿರುವುದು ದೃಡ ಪಟ್ಟಿದ್ದು ಅವರಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೋಚರ್ ಬೆಸಿಸ್, ದಿನಗೂಲಿಯಲ್ಲಿ, ಭದ್ರತಾ ಸಿಬ್ಬಂದಿಗಳು, ಖಾಯಂ ನೌಕರರು ಹೀಗೆ ವಿವಿಧ ವಿಭಾಗದಲ್ಲಿ ಸಿಬ್ಬಂದಿಗಳಿದ್ದಾರೆ.
ತಪ್ಪಿ ನಡೆಯುವವರ ಮೇಲೆ ಆಡಳಿತಾಧಿಕಾರಿ ಜುಬಿನ್ ಮಹಾಪಾತ್ರ, ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಇವರುಗಳ ದಿಟ್ಟ ಕ್ರಮ ಅಶಿಸ್ತು ಪ್ರದರ್ಶಿಸುವ ನೌಕರರಿಗೆ ಬಿಸಿ ಮುಟ್ಟಿಸಿದೆ. ಇದರ ಜೊತೆ ಸಮವಸ್ತ್ರದಲ್ಲೇ ಕರ್ತವ್ಯ ನಿರ್ವಹಿಸುವುದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿರುವುದಾಗಿ ತಿಳಿದು ಬಂದಿದೆ.