


ಕಡಬ: ಇಲ್ಲಿನ ಪೇಟೆ ವ್ಯಾಪ್ತಿಯಲ್ಲಿ ಅ.13ರ ಮದ್ಯರಾತ್ರಿ ಗಸ್ತು ನಿರತ ಪೊಲೀಸರ ಜೊತೆ ವಾಗ್ವಾದ ನಡೆಸಿದ ಯುವಕರ ತಂಡ ಪೊಲೀಸ್ ಠಾಣೆಗೆ ಹಾಜರಾಗಿದ್ದು ನಾಲ್ವರಿಗೆ ಸಣ್ಣ ಅಪರಾಧದಡಿ ಕೇಸು ದಾಖಲಿಸಿ ದಂಡ ವಿಧಿಸಿದ್ದಾರೆ.
ವಾಗ್ವಾದ ನಡೆಸಿದ ತಂಡಕ್ಕೆ ಮರುದಿನ ಠಾಣೆಗೆ ಬರುವಂತೆ ಸೂಚಿಸಿದರೂ ರಾಜಕೀಯ ಪ್ರಭಾವ ಬಳಸಿ ಹಾಜರಾಗದೆ ಪೊಲೀಸರನ್ನು ಸತಾಯಿಸಿದ್ದರು. ಈ ಘಟನೆ ಸಂಬಂಧಿಸಿ ಕ್ಯಾಂಟಿನ್ ಮಾಲಕನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರೂ ಪೊಲೀಸರೊಂದಿಗೆ ದುರ್ವರ್ತನೆ ತೋರಿದ ಯುವಕರನ್ನು ವಿಚಾರಣೆ ಮಾಡಿಲ್ಲ ಎಂದು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿತ್ತು.
ನಂತರದ ಬೆಳವಣಿಗೆಯಲ್ಲಿ ಪೊಲೀಸರು ಬರುವಂತೆ ಖಡಕ್ ಎಚ್ಚರಿಕೆ ನೀಡಿದ್ದರು. ಹೀಗಾಗಿ ನಾಲ್ವರು ಠಾಣೆಗೆ ಹಾಜರಾಗಿದ್ದು ಪೊಲೀಸರು ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಏನಿದು ಘಟನೆ: ಕಾಲೇಜು ರಸ್ತೆಯ ಬಳಿ ಮಿನಿ ಕ್ಯಾಂಟಿನ್ ಮುಚ್ಚುತ್ತಿದ್ದ ವೇಳೆ ಮದ್ಯ ರಾತ್ರಿ ಬಂದ ಯುವಕರ ಗ್ಯಾಂಗ್ ತಿಂಡಿಗಾಗಿ ಬೇಡಿಕೆ ಇಟ್ಟಿದ್ದು ಕ್ಯಾಂಟೀನ್ ಮಾಲಕ ಆಮ್ಲೇಟ್ ಮಾಡಿಕೊಡುತ್ತಿದ್ದ ವೇಳೆ ಸ್ಥಳಕ್ಕೆ ಪೊಲೀಸರು ಬಂದು ವಿಚಾರಿಸಿದ್ದರು. ವ್ಯವಹಾರ ಅವಧಿ ಮುಗಿದಿದ್ದರೂ ಅಂಗಡಿ ತೆರೆದಿರುವುದಕ್ಕೆ ವಿವರಣೆ ಕೇಳುತ್ತಿದ್ದ ಸಂದರ್ಭ ಸ್ಥಳದಲ್ಲಿದ್ದ ಯುವಕರ ಗ್ಯಾಂಗ್ ಪೊಲೀಸರೊಂದಿಗೆ ದುರ್ವರ್ತನೆ ತೋರಿದ್ದರು.
ಸ್ಥಳದಲ್ಲಿದ್ದ ಮತ್ತೋರ್ವ ಕಾಂಗ್ರೆಸ್ ಮುಖಂಡರ ಬೆಂಬಲಿಗರೆಂದು ಪರಿಚಯಿಸಿಕೊಂಡು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದರು ಎನ್ನಲಾಗಿತ್ತು.