ತುಳುನಾಡಿನ ಮೂಲ ದೇವರಾದ ಬಿರ್ಮೆರೆ ದಿವ್ಯ ಸಾನಿಧ್ಯ ಮತ್ತು ಮೊಗೇರ ದೈವಗಳಾದ ಮುದ್ದ ಕಳಲರು ಐಕ್ಯವಾದ ಪುಣ್ಯ ಸ್ಥಳದಲ್ಲಿ ಸ್ವರ್ಣ ಪ್ರಶ್ನಾ ಚಿಂತನಾ ಕಾರ್ಯ

ತುಳುನಾಡಿನ ಮೂಲ ದೇವರಾದ ಬಿರ್ಮೆರೆ ದಿವ್ಯ ಸಾನಿಧ್ಯ ಮತ್ತು ಮೊಗೇರ ದೈವಗಳಾದ ಮುದ್ದ ಕಳಲರು ಐಕ್ಯವಾದ ಪುಣ್ಯ ಸ್ಥಳದಲ್ಲಿ ಸ್ವರ್ಣ ಪ್ರಶ್ನಾ ಚಿಂತನಾ ಕಾರ್ಯ

Kadaba Times News

 ಕಡಬ ಟೈಮ್: ತುಳುನಾಡಿನ ಮೂಲ ದೇವರಾದ ಬಿರ್ಮೆರೆ ದಿವ್ಯ ಸಾನಿಧ್ಯ ಮತ್ತು ಮೊಗೇರ ದೈವಗಳಾದ ಮುದ್ದ ಕಳಲರು ಐಕ್ಯವಾದ ಪುಣ್ಯ ಸ್ಥಳವಾಗಿರುವ ದಕ್ಷಿಣ  ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮ ಪಂಚಾಯತ್  ವ್ಯಾಪ್ತಿಯ  ಬಿರ್ಮೆರೆ ಗುಂಡ ಎಂಬಲ್ಲಿ   ಬೋರ್ಕರ್ ಕುಟುಂಬದ ತರವಾಡು ಮನೆ - ಬೆಮ್ಮೆರ ಗುಂಡದಲ್ಲಿ  ಮನಮೋಹನ ಬಲ್ಯಾಯ ದೊಡ್ಡಡ್ಕ ಹಾಗೂ ಧನೇಶ್ ವೆಳ್ಳಿಕೋತ್ ಕಾಂಞಗಾಡ್ ಇವರಿಂದ "ಸ್ವರ್ಣ ಪ್ರಶ್ನಾ ಚಿಂತನಾ ಕಾರ್ಯ ನೆರವೇರಲಿದೆ.


ಬಿರ್ಮೆರೆ ಗುಂಡದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಸಂದರ್ಭ

ಪೂರ್ವ ಭಾವಿಯಾಗಿ ಈಗಾಗಲೇ ಶ್ರಮದಾನದ ಮೂಲಕ ಸಿದ್ದತೆ ಮಾಡಲಾಗಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ.   ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್- ಆಲಂಕಾರು ಕಚೇರಿ (ಆರು ಜಿಲ್ಲೆಗಳ ಸಂಯುಕ್ತ ವೇದಿಕೆ) ಮುಂದಾಳತ್ವದಲ್ಲಿ ಬೋರ್ಕರ್ ಕುಟುಂಬದ  ದಿವಾಕರ ರಾವ್  ಅವರ ಸಹಕಾರದೊಂದಿಗೆ ಈ ಮಹತ್ವದ ಕಾರ್ಯ ನಡೆಯಲಿದೆ.

ತುಳುನಾಡಿನ ಎಲ್ಲಾ ದೈವ ಶಕ್ತಿಗಳಿಗೂ ಮೂಲ ದೇವರು "ಬಿರ್ಮೆರ್" ಬಿರ್ಮರನ್ನು ಬೆಮ್ಮೆರ್, ಬ್ರಹ್ಮ, ನಾಗಬ್ರಹ್ಮ ಇತ್ಯಾದಿಯಾಗಿ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮೊಗೇರ ದೈವಾದಿಯಾಗಿ ಎಲ್ಲಾ ದೈವಗಳ ಸಂಧಿ ಪಾಡ್ವಾನಗಳಲ್ಲೂ ಬಿರ್ಮೆರ್ ಏಳು ಕಡಲುಗಳ ನಡುವಿನಲ್ಲಿ ಉದ್ಭವವಾದಾಗ "ತಾರಿದಾತ್ ಎತ್ತರೊಗು ಗೋಳಿದಾತ್ ಬಂಬಲಗ್ ತೋಜಿದ್ ಬತ್ತೆರೆಂದ್" ಉಲ್ಲೇಖವಿದೆ.

ಅಂದರೆ ತಾಳೆ ಮರದಷ್ಟು ಎತ್ತರಕ್ಕೆ ಗೋಳಿ ಮರದಷ್ಟು ವಿಸ್ತಾರವಾಗಿ ಕಂಡು ಬಂದ "ಬಿರ್ಮೆರ್"ರನ್ನು ಜನರು ಭಯ ಭಕ್ತಿಯಿಂದ ಪ್ರಾರ್ಥಿಸಿದಾಗ - - ಸಂಧಿಯ ಉಲ್ಲೇಖದಂತೆ "ಬಚ್ಚಿರೆದಾತ್ ಬಾಮೊಗು ಬಜ್ಜೆಯಿದಾತ್ ಉರುಂಟುಗು ತೋಜಿದ್ ಬತ್ತೆರ್" ಎಂಬ ವರ್ಣನೆ ಇದೆ. ಅಂದರೆ ಬೃಹತ್ ಗಾತ್ರದ ಬಿರ್ಮೆರ್ ಜನ ಸಾಮಾನ್ಯರ ಭಕ್ತಿಗೆ ವೀಳ್ಯದೆಲೆಯಷ್ಟು ಎತ್ತರಕ್ಕೆ ಅಡಿಕೆಯಷ್ಟು ದುಂಡಾಕಾರಕ್ಕೆ ಬಂದು ಸಮುದ್ರ ಬದಿಯಲ್ಲಿ ಬಂದು ನಿಲ್ಲುತ್ತಾರೆ. ಆಗ ದಕ್ಷಿಣ ಸೀಮೆಯ ಬ್ರಾಹ್ಮಣರು ಬಂದು "ಬಿರ್ಮೆರ್"ರನ್ನು ಪಡುಮಲೆಯ ಕೆಂಪು ಕೇಪುಲಾಜೆಯ "ಬಿರ್ಮೆರೆಗುಂಡ"ದಲ್ಲಿ ಪ್ರತಿಷ್ಠಾಪಿಸುತ್ತಾರೆ. ಹಾಗೆ ಜಾಗಕ್ಕೆ "ಬೆಮ್ಮೆರೆಗುಂಡ" (ಬ್ರಹ್ಮರಗುಂಡ) ಎಂದು ಹೆಸರು ಪಡೆಯಿತು. ಭಾರತದಲ್ಲಿ ಎಲ್ಲಿಯೂ ಒಂದು ಪ್ರದೇಶದ ಹೆಸರು "ಬೆಮ್ಮೆರೆಗುಂಡ" (ಬ್ರಹ್ಮರಗುಂಡ) ಎಂಬ ಹೆಸರಿನಿಂದ ಕರೆಯಲ್ಪಡುವುದಿಲ್ಲ. ಇದೊಂದು ಅಗೋಚರ ವಿಶಿಷ್ಟ ಶಕ್ತಿಯ ಪುಣ್ಯ ಕ್ಷೇತ್ರವಾಗಿದೆ.


ಶ್ರೀ ಮೊಗೇರ ದೈವಗಳ ಕಥಾನಕ ಪ್ರಕಾರ ಕೆಡ್ಡಸದ ಬೇಟೆಗಾಗಿ ಪಡುಮಲೆಗೆ ಬಂದ ತುಳುನಾಡಿನ ವೀರ ಮೊಗೇರ ಅವಳಿ ಪುಂಗವರಾದ "ಮುದ್ದ ಕಳಲರು ಕೆಡ್ಡಸದ ಮೂರು ದಿನದ ಕಾಡ ಬೇಟೆ, ಮೂರು ದಿನದ ನೀರ ಬೇಟೆ ಯಶಸ್ವಿಯಾಗಿ ಮುಗಿಸಿ, ತಮ್ಮ ಹುಟ್ಟಿನ ಬಗ್ಗೆ ತಮ್ಮ ತಂದೆ ಬಿರ್ಮರಿಗೆ ಹೇಳಿದ್ದ ಹರಕೆಯನ್ನು ಆಗಿನ ಕಾಲದ ತುಳುನಾಡಿನ ಕಾರಣಿಕ ಶಕ್ತಿಯಾಗಿದ್ದ "ಕೆಂಪು ಕೇಪುಲಾಜೆ" ಬೆಮ್ಮೆರೆ ಗುಂಡದ "ಬಿರ್ಮೆರ್"ರಿಗೆ ಪುಂಡಿ ಪಣವು ಹರಿಕೆಯನ್ನು ಸಲ್ಲಿಸಲು ಮೊದಲಾಗಿ "ಕೆಂಪು ಕೇಪುಲಾಜೆ" ಕಾಡಿನ ತೀರ್ಥದ ಕಲ್ಲಿನಲ್ಲಿ "ಮಾವೋರಿ ತೀರ್ಥಸ್ನಾನ" ಮಾಡಿ, ಕೆಂಪು ಕೇಪುಲಾಜೆ ಬೆಮ್ಮೆರೆ ಗುಂಡದಲ್ಲಿಬಿರ್ಮೆರ್"ರಿಗೆ ಮಾಯಾ ಪೂಜೆಯ ಮೂಲಕ ಪುಂಡಿ ಪಣವು ಕಾಣಿಕೆ ಸಲ್ಲಿಸುತ್ತಾರೆ. ಮುದ್ದ-ಕಳಲರ ಮಾಯಾ ಪೂಜೆಯ ಶಬ್ದವನ್ನು ಕೇಳಿ ಅರ್ಚಕರಾದಿಯಾಗಿ ಬಂದ ಜನರೆಲ್ಲರೂ ಮುದ್ದ-ಕಳಲರ ಕಾರ್ಣಿಕ ಶಕ್ತಿಯನ್ನು ನೋಡಿ ಆಶ್ಚರ್ಯಚಕಿತರಾಗಿ ಭಕ್ತಿಯಿಂದ ವಂದಿಸುತ್ತಾರೆ.

ಬೆಮ್ಮೆರೆ ಕಯ

ಅಲ್ಲಿಂದ ಮುದ್ದ-ಕಳಲರು ಬೆಮ್ಮೆರ ಗುಂಡದ ಎದುರುದಿಕ್ಕಿಗೆ ಇರುವ ಬೆಮ್ಮೆರೆ ಗುಂಡಿಯ (ಬೆಮ್ಮೆರೆ ಕಯ) ಹತ್ತಿರ ಬಂದಾಗ "ಬಿರ್ಮೆರ್" ಮಾಯಾ ಸ್ವರೂಪದಲ್ಲಿ ಬಂಗಾರ ವರ್ಣದ ಮೀನಿನಂತೆ ಗೋಚರಿಸಿದಾಗ, ದೈವತ್ವದ ಅರಿವಾಗಿ ಬಂಗಾರ ವರ್ಣದ ಮೀನಿನೊಂದಿಗೆ ಮುದ್ದ-ಕಳಲರು ಈಜಾಡಿದಾಗ ಬಂಗಾರ ವರ್ಣದ ಮೀನುಬಿರ್ಮೆರ್" ಆಗಿ ಸಾಕ್ಷಾತ್ಕರವಾದಾಗ ಮುದ್ದ-ಕಳಲರು ಬಿರ್ಮೆರೊಂದಿಗೆ ಐಕ್ಯವಾಗಿ ದೈವತ್ವ ಪಡೆಯುತ್ತಾರೆ. ತನ್ನಿಮಾನಿಗಳು ದಕ್ಷಿಣ ಸೀಮೆಗೆ ಯುದ್ಧಕ್ಕೆ ಹೋದಂತಹ ತನ್ನ ಗಂಡ ಹಾಗೂ ಪಡುಮಲೆಯ ಕೆಡ್ಡಸದ ಬೇಟೆಗಾಗಿ ಹೋದಂತಹ ಅಣ್ಣಂದಿರನ್ನು ಹುಡುಕುತ್ತಾ ಬಂದಂತಹ ತನ್ನಿಮಾನಿಗಳು ಪಡುಮಲೆಯ ಕೆಂಪು ಕೇಪುಲಾಜೆಯ ಬ್ರಹ್ಮರ ಗುಂಡಕ್ಕೆ ಬಂದು "ಬಿರ್ಮೆರ" ಪೂಜೆ ಮಾಡಿ ಪುಂಡಿ ಪಣವು ಕಾಣಿಕೆ ಸಲ್ಲಿಸುತ್ತಾಳೆ.

ಸುಮಾರು 560 ವರ್ಷಗಳ ಹಿಂದೆ ನಡೆದಿರುವ ಘಟನೆಗಳಿಗೆ ಸ್ಪಷ್ಟ ಸ್ವರೂಪ ಮತ್ತು   ಮೊಗೇರ ಜನಾಂಗದ ಹಿರಿಯರು ಆರಾಧನೆ ಮಾಡಿಕೊಂಡು ಬಂದ ಬಿರ್ಮರಿಗೆ ಶಾಶ್ವತ ಮೂಲ ಕ್ಷೇತ್ರ ರೂಪಿಸುವ ಕಾರ್ಯ ಈ ಸ್ವರ್ಣ ಪ್ರಶ್ನಾ ಚಿಂತನಾ ಕಾರ್ಯಕ್ರಮದ್ದಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top