




ಕಡಬ ಟೈಮ್ಸ್,ಉಪ್ಪಿನಂಗಡಿ: ಅಕ್ಷರ ದಾಸೋಹದ ಅನ್ನವನ್ನು ಚರಂಡಿಗೆ ಎಸೆದು ಬೇಜವಾಬ್ದಾರಿ ಪ್ರದರ್ಶಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಶಿಕ್ಷಣ ಶಾಲೆಯ ಶಿಕ್ಷಕರ
ಮತ್ತು ಎಸ್.ಡಿ.ಎಂ.ಸಿ. ಸದಸ್ಯರ ವಿರುದ್ಧ ಪೋಷಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶಾಲೆಯಲ್ಲಿ ಪ್ರತಿನಿತ್ಯ ಅನ್ನವನ್ನು ರಸ್ತೆ ಬದಿಯ ಚರಂಡಿಗೆ ಎಸೆಯುತ್ತಿರುವುದು
ಬೆಳಕಿಗೆ ಬಂದಿದೆ.
ಅನ್ನವನ್ನು ಚರಂಡಿಗೆ ಎಸೆಯುತ್ತಿರುವುದರಿಂದ ಚರಂಡಿ ಬ್ಲಾಕ್ ಆಗಿ ಗಬ್ಬು ನಾರುತ್ತಿದೆ. ಚರಂಡಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಶಾಲೆಯ ಮಕ್ಕಳಿಗೆ ಮತ್ತು ಸುತ್ತಮುತ್ತಲ ಜನರಿಗೆ ರೋಗ ಹರಡುವ ಭೀತಿ ಎದುರಾಗಿದೆ.
ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕುಚಲಕ್ಕಿ ಉಪಯೋಗ ಮಾಡುತ್ತಾರೆ. ಆದರೆ ಶಾಲೆಯಲ್ಲಿ ಬಿಳಿ ಅಕ್ಕಿ ಊಟ ನೀಡಲಾಗುತ್ತಿದ್ದು, ಇದರಿಂದ ಹಲವು
ಮಕ್ಕಳ ಆರೋಗ್ಯದಲ್ಲಿ
ವ್ಯತ್ಯಾಸವಾಗಿದೆ. ಹಾಗಾಗಿ ಶಾಲೆಯಲ್ಲಿ ತಯಾರಿಸುವ ಅನ್ನದ ಊಟವನ್ನು ವಿದ್ಯಾರ್ಥಿಗಳು ಸೇವಿಸುತ್ತಿಲ್ಲ ಎನ್ನಲಾಗಿದೆ. ಇವೆಲ್ಲದರ ನಡುವೆ ಅಕ್ಷರ ದಾಸೋಹದ ಅನ್ನವನ್ನು ಶಾಲೆಯ ಶಿಕ್ಷಕ ವರ್ಗ ಚರಂಡಿಗೆ ಎಸೆದು ವ್ಯರ್ಥಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಉಪ್ಪಿನಂಗಡಿ ಪಂಚಾಯತ್ ಸದಸ್ಯ ಧನಂಜಯ ಕುಮಾರ್ ಅವರು ಶಾಲಾ ಆಡಳಿತ ಮತ್ತು ಶಿಕ್ಷಕರು ಕೂಡಲೇ ಈ ಸಮಸ್ಯೆಗೆ ಪರಿಹಾರ
ಕಂಡು ಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರಿಂದ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಂ. ಪಿಡಿಒ ವಿಲ್ಫೆಡ್ ಲಾರೆನ್ಸ್ ರೋಡ್ರಿಗಸ್, ಚರಂಡಿಯಲ್ಲಿ ಮಕ್ಕಳಿಗೆ ನೀಡಬೇಕಾದ ಅನ್ನ ಎಸೆಯಲ್ಪಟ್ಟಿರುವುದನ್ನು ಆಕ್ಷೇಪಿಸಿ, ತತ್ಕ್ಷಣವೇ ಚರಂಡಿಯಲ್ಲಿದ್ದ ಅನ್ನವನ್ನು ತೆರವುಗೊಳಿಸಿ ಸುಸ್ಥಿತಿಯಲ್ಲಿರಿಸಬೇಕೆಂದು ಶಾಲಾ ಮುಖ್ಯೋ ಪಾಧ್ಯಾಯರಿಗೆ ನಿರ್ದೇಶನ ನೀಡಿದರು.