




ಕಡಬ/ಪಂಜ: ಭಾರೀ ಮಳೆ ಹಿನ್ನೆಲೆ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕಡಬ-ಪಂಜ ಪ್ರಮುಖ ರಸ್ತೆಯ ಕೂಟೆಲ್ ಸಾರು ಎಂಬಲ್ಲಿ ರಸ್ತೆಗೆ ಅಧಿಕ ಪ್ರಮಾಣದಲ್ಲಿ ನೀರು ನುಗ್ಗಿದ ಕಾರಣ ಶುಕ್ರವಾರ ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿ ನೀರಿನ ನಡುವೆ ಅನಿವಾರ್ಯವಾಗಿ ರಸ್ತೆ ದಾಟಿದ್ದಾರೆ.
ಕಡಬ ಭಾಗದಿಂದ ಹಲವು ವಿದ್ಯಾರ್ಥಿಗಳು ಐಟಿಐ ಮತ್ತು ಡಿಪ್ಲೊಮ ಕೋರ್ಸುಗಳಿಗಾಗಿ ಈ ರಸ್ತೆಯ ಮೂಲಕ ನಿಂತಿಕಲ್ಲು ಕಾಲೇಜಿಗೆ ತೆರಳುತ್ತಿದ್ದಾರೆ. ಶುಕ್ರವಾರ ಭಾರೀ ಮಳೆಗೆ ಬಸ್ ಅರ್ಧದ ವರೆಗೆ ಮಾತ್ರ ಇದ್ದು ಕಾಲೇಜು ಮಕ್ಕಳು ಸಹಿತ ಪ್ರಯಾಣಿಕರನ್ನು ಇಳಿಸಲಾಗಿತ್ತು. ಹೀಗಾಗಿ ಎಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟುವ ಅನಿವಾರ್ಯತೆ ಎದುರಾಗಿತ್ತು.
ರಸ್ತೆ ದಾಟುವ ವೇಳೆ ಸ್ಥಳೀಯರು ನೆರವಿಗೆ ಧಾವಿಸಿರುವುದಾಗಿ ತಿಳಿದು ಬಂದಿದೆ. ಇನ್ನೂ ಎಡಮಂಗಲ ಮೂಲಕ ಪರ್ಯಾಯ ಮಾರ್ಗವಿದ್ದರೂ ಬಹಳ ದೂರವಾಗಿದೆ.ಅಲ್ಲದೆ ಬಸ್ಸಿನ ಅನುಗುಣವಾಗಿ ಕಾಲೇಜು ಮಕ್ಕಳು ಸಂಚರಿಸಬೇಕಾಗಿದೆ .
ದ.ಕ ಜಿಲ್ಲೆಯಲ್ಲಿ ಅಂಗನವಾಡಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಆದರೆ ಪದವಿ ಇನ್ನಿತರ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿಲ್ಲ, ಹೀಗಾಗಿ ಕಾಲೇಜು ವಿದ್ಯಾರ್ಥಿಗಳು ಅನಿವಾರ್ಯವಾಗಿ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಭಾರೀ ಮಳೆ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೂ ರಜೆ ವಿಸ್ತರಿಸಿ ಸಂಭಾವ್ಯ ಅಪಾಯಗಳನ್ನು ತಪ್ಪಿಸಬೇಕೆಂದು ಕಾಲೇಜು ವಿದ್ಯಾರ್ಥಿಗಳು ವಿನಂತಿಸಿದ್ದಾರೆ.