




ಕಡಬ ಟೈಮ್ಸ್(KADABA TIMES):ಕಡಬ: ಐತ್ತೂರು ಗ್ರಾ.ಪಂ ಹೈಕೋರ್ಟ್ ನಲ್ಲಿ ಹೂಡಿದ ದಾವೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಪಂಚಾಯತ್ ಪರ ವಕೀಲರನ್ನು ಬದಲಾಯಿಸುವ ಬಗ್ಗೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರು ಪತ್ರ ಬರೆದಿದ್ದಾರೆ ಎನ್ನುವ ವಿಚಾರ ಚರ್ಚೆಯಾಗಿದೆ.
ಉಪಾಧ್ಯಕ್ಷರು ಸೇರಿದಂತೆ ೯ ಮಂದಿ ಗ್ರಾ.ಪಂ. ಸದಸ್ಯರು ವಕೀಲರನ್ನು ಬದಲಾಯಿಸದಂತೆ ಪಂಚಾಯತ್ಗೆ ಪತ್ರ ನೀಡಿದ್ದು, ಈ ಬಗ್ಗೆ ಚರ್ಚೆ ನಡೆದು ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಬರೆದುಕೊಳ್ಳುವ ಬಗ್ಗೆ ತೀರ್ಮಾನಿಸಿರುವುದು ಐತ್ತೂರು ಗ್ರಾ,ಪಂ, ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಹೈಕೋರ್ಟ್ ನಲ್ಲಿ ಇತ್ಯರ್ಥದಲ್ಲಿರುವ ದಾವೆಗೆ ನೇಮಿಸಲಾದ ವಕೀಲರ ಬದಲಿಗೆ ಇನ್ನೊಬ್ಬರು ವಕೀಲರನ್ನು ನೇಮಕ ಮಾಡಲು ಪ್ರಯತ್ನಿಸಿರುವುದು ನಮ್ಮ ಗಮನಕ್ಕೆ ಬಂದಿದೆ, ಇದಕ್ಕೆ ನಮ್ಮ ಸಂಪೂರ್ಣ ವಿರೋಧ ಇದ್ದು ಯಾವುದೇ ಕಾರಣಕ್ಕೂ ಹಾಲಿ ಇರುವ ವಕೀಲರನ್ನು ಬದಲಾವಣೆ ಮಾಡಬಾರದು, ಬದಲಾವಣೆ ಮಾಡಿದಲ್ಲಿ ಇನ್ನೊಂದು ವಕೀಲರಿಗೆ ಹಣ ಕೊಡುವುದು ಎಲ್ಲವೂ ಪಂಚಾಯತ್ಗೆ ಹೊರೆಯಾಗುತ್ತದೆ.

ಒಂದು ವೇಳೆ ನಮ್ಮ ಮನವಿಯನ್ನು ತಿರಸ್ಕರಿಸಿ ಬೇರೆ ವಕೀಲರನ್ನು ನೇಮಕ ಮಾಡಿದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಅಭಿವೃದ್ದಿ ಅಧಿಕಾರಿಯವರೇ ಹೊಣೆಯಾಗುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಪತ್ರವನ್ನು ಸಭೆಯಲ್ಲಿ ಪಿಡಿಒ ಅವರು ಓದಿದರು. ಇದಕ್ಕೆ ಏನು ಮಾಡುತ್ತಿರಿ ಎಂದು ಸದಸ್ಯರು ಪ್ರಶ್ನಿಸಿದಾಗ ಅದಕ್ಕೆ ಕಾರ್ಯದರ್ಶಿ ರಮೇಶ್ ಅವರು ಉತ್ತರ ನೀಡಿ, ಈ ಹಿಂದೆ ವಕೀಲರನ್ನು ಬದಲಾಯಿಸುವ ಬಗ್ಗೆ ನಿರ್ಣಯ ಮಾಡಲಾಗಿತ್ತು, ಇನ್ನೂ ನಿರ್ಣಯ ಬದಲಾವಣೆ ಮಾಡಬೇಕಾದರೆ ಕೆಲವೊಂದು ನಿಯಮಗಳಿವೆ ಎಂದರು. ಈ ಬಗ್ಗೆ ಚರ್ಚೆ ನಡೆದು ಈ ವಿಚಾರದ ಬಗ್ಗೆ ಇ.ಒ.ರವರಿಗೆ ಬರೆದುಕೊಳ್ಳುವ ಎಂದು ತೀರ್ಮಾನಿಸಲಾಯಿತು.
ಐತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮೀನು ಮಾರಾಟದ ಹಕ್ಕನ್ನು ಏಲಂ ಮಾಡುವ ಬಗ್ಗೆ ನಿರ್ಣಯ ಮಾಡಲಾಯಿತು, ಈ ವಿಚಾರಕ್ಕೆ ಸಂಬಂಧಿಸಿ ಸದಸ್ಯರು ಸಾರ್ವಜನಿಕ ಪ್ರಕಟಣೆ ಪತ್ರಿಕೆಯಲ್ಲಿ ನೀಡಬೇಕು ಆಗ ಹೆಚ್ಚಿನ ಜನ ಏಲಂಗೆ ಬರುತ್ತಾರೆ ಎಂದು ಹೇಳಿದರು. ಇದಕ್ಕೆ ಪಿಡಿಒ ಅವರು ಉತ್ತರಿಸಿ ಪತ್ರಿಕೆಯಲ್ಲಿ ಜಾಹೀರಾತು ಕೊಡುವುದು ವೆಸ್ಟ್ ನೋಟಿಸು ಬೋರ್ಡ್ ನಲ್ಲಿ ಹಾಕುವ ಎಂದರು. ಇದಕ್ಕೆ ಸದಸ್ಯರು ನೀವು ಪ್ರಕಟಣೆ ನೀಡಲೇಬೇಕು ಎಂದು ಆಗ್ರಹಿಸಿದರು, ಕೊನೆಗೆ ಪ್ರಕಟಣೆ ನೀಡುವ ಎಂದು ಒಪ್ಪಿಕೊಂಡರು.
ಸಭೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ನಡೆದು ೧೫ನೇ ಹಣಕಾಸು ಬಗ್ಗೆ ಕ್ರೀಯಾ ಯೋಜನೆ ತಯಾರಿಸಲಾಯಿತು.