




ಕಡಬ ಟೈಮ್ಸ್(KADABA TIMES):ನೆಲ್ಯಾಡಿ/ಶಿರಾಡಿ: ಚಾರ್ಜ್ಗೆ ಇಟ್ಟಿದ್ದ ಮೊಬೈಲ್ ತಪ್ಪಿಸುವ ವೇಳೆ ಸಿಡಿಲು ಬಡಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಮೃತನ ಸಂಬಂಧಿಕರು ಆಗ್ರಹಿಸಿದ್ದರು.ಅಲ್ಲದೆ ಜಿಲ್ಲಾಧಿಕಾರಿಯವರೇ ಸ್ಥಳಕ್ಕೆ ಬಂದು ಭರವಸೆ ನೀಡಬೇಕೆಂಬ ಬೇಡಿಕೆಯಿಟ್ಟು ಮೃತದೇಹದ ಅಂತ್ಯಕ್ರಿಯೆ ನಡೆಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕಡಬ ತಹಶೀಲ್ದಾರ್ ಅನಂತಶಂಕರರವರು ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡು ಪ್ರಾಕೃತಿಕ ವಿಕೋಪದಡಿ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.ಇದಕ್ಕೆ ಪೂರಕವಾಗಿ ಸ್ಥಳದಲ್ಲಿದ್ದ ಬಿಜೆಪಿ ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿಯವರು ಸಚಿವ ಎಸ್.ಅಂಗಾರರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರಿಹಾರ ನೀಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ವಿಚಾರ ವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಸೂಕ್ತಕ್ರಮ ಕೈಗೊಳ್ಳಲಾಗುವುದಾಗಿ ಸಚಿವರು ಭರವಸೆ ನೀಡಿದರು. ಬಳಿಕ ಮೃತದೇಹದ ಅಂತಿಮ ವಿಧಿ ವಿಧಾನ ಮಾಡಿ ದಫನ ಮಾಡಲಾಯಿತು.

ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ಅಡ್ಡಹೊಳೆ ಪುಲ್ಲೋಟ್ಟೆ ನಿವಾಸಿ ಮೋನಚ್ಚ ಕೆ.ಕೆ.ಹಾಗೂ ಬೀನಾ ದಂಪತಿ ಪುತ್ರ ರಾಫೀನ್ (14ವ.) ಜು.27ರಂದು ಮಧ್ಯಾಹ್ನ ಮನೆಯಲ್ಲಿ ಚಾರ್ಜ್ಗೆ ಇಟ್ಟ ಮೊಬೈಲ್ ತಪ್ಪಿಸುವ ವೇಳೆ ಸಿಡಿಲು ಬಡಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಬಳಿಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿಯೇ ಮನೆಯವರಿಗೆ ಬಿಟ್ಟು ಕೊಡಲಾಗಿತ್ತು.