




ಕಡಬ ಟೈಮ್ಸ್(KADABA TIMES):ಕಡಬ ತಾಲೂಕಿನ ಶಿರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಗುಂಡ್ಯ ಎಂಬಲ್ಲಿ ಸುಸಜ್ಜಿತ ರೀತಿಯಲ್ಲಿ ನಿರ್ಮಾಣವಾಗಿದ್ದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಜಂಕ್ಷನ್ ಬಳಿ ಸುಸಜ್ಜಿತ 7 ಶೌಚಾಲಯ ಹಾಗೂ 4 ಸ್ನಾನಗೃಹಗಳನ್ನು ಒಳಗೊಂಡ ಸುಸಜ್ಜಿತ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಇದು ಸಾರ್ವಜನಿಕ ಬಳಕೆಗೆ ಮುಕ್ತವಾಗಿತ್ತು.
ಶೌಚಾಲಯದ ನಿರ್ವಹಣೆಯನ್ನು ಹಾಸನದ ಜನಸೇವಾ ಫೌಂಡೇಶನ್ನಿಗೆ ಒಪ್ಪಿಸಲಾಗಿತ್ತು. ನೆಲ್ಯಾಡಿಯಿಂದ ಮಾರನಹಳ್ಳಿ ವರೆಗೆ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಪ್ರಯಾಣಿಕರು ರಸ್ತೆಬದಿ ಅಥವಾ ಹೋಟೆಲ್ ಗಳನ್ನು ಅವಲಂಬಿ ಸುತ್ತಿದ್ದರು.

ಬೆಂಗಳೂರು ಮಂಗಳೂರು ಧರ್ಮಸ್ಥಳ ಸುಬ್ರಮಣ್ಯ ಮುಂತಾದ ಕಡೆಗಳಿಂದ ಹೋಗುವ ಪ್ರಯಾಣಿಕರಿಗೆ ಉಪಯೋಗವಾಗುತ್ತಿದ್ದ ಶೌಚಾಲಯ ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ಬೀಗ ಜಡಿಯಲಾಗಿದೆ.
ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಕಟ್ಟಿದ ಈ ಶೌಚಾಲಯ ಇದ್ದರೂ ಇಲ್ಲದಂತಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಂಬಂಧಪಟ್ಟವರು ಕೂಡಲೇ ಗಮನ ಹರಿಸಿ ಸಾರ್ವಜನಿಕ ವ್ಯವಸ್ಥೆಗೆ ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.