




ಕಡಬ ಟೈಮ್ಸ್ (KADABA TIMES):ಆಲಂಕಾರು ಹಸಿಮೀನು ಮಾರಕಟ್ಟೆಯ ಏಲಂ ಪ್ರಕ್ರಿಯೆಯಲ್ಲಿ ಸ್ಥಳಿಯಾಡಳಿತ ನಿಯಮ ಬಾಹಿರವಾಗಿ ಏಲಂ ನಡೆಸಿ ಸ್ಥಳೀಯರಿಗೆ ಅನ್ಯಾಯ ಮಾಡಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಹಸಿ ಮೀನು ಮಾರುಕಟ್ಟೆಯ ಏಲಂ ಪ್ರಕ್ರಿಯೆ ಸೆ .15 ರಂದು ನಿಗದಿ ಮಾಡಿದ ಪಂಚಾಯಿತಿ ಅಧಿಕಾರಿಗಳು ಪ್ರಕಟಣೆ ನೀಡಿ 3.10 ಲಕ್ಷ ರೂ ಆರಂಭಿಕ ಮೊತ್ತ ನಿಗದಿ ಪಡಿಸಿದ್ದರು. ಬಿಡ್ಡುದಾರರು ಟೆಂಡರ್ ಅರ್ಜಿ ಹಾಕಿ ಯಾರೂ ಕೂಡಾ 3.10 ಲಕ್ಷ ರೂಗೆ ಕರೆಯಲು ಮುಂದಾಗಿಲ್ಲ. ಈ ಮಧ್ಯೆ ಸ್ಥಳೀಯ ಹಿಂದೂ ಸಂಘಟನೆಯ ಮುಖಂಡರು ಟೆಂಡರ್ ಪ್ರಕ್ರಿಯೆ ವೇಳೆ ಮನವಿ ಮಾಡಿ ಟೆಂಡರ್ ಮೊತ್ತವನ್ನು ಕಡಿಮೆ ಮಾಡಬೇಕು, ಸ್ಥಳೀಯರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಅಗ್ರಹ ವ್ಯಕ್ತಪಡಿಸಿದ್ದವು. ಇವರ ಮನವಿಗೆ ಪಂ ಅಧಿಕಾರಿಗಳು ಸ್ಪಂದಿಸಿದರು. ಆದರೆ ಸ್ಥಳೀಯರಿಗೆ ಅವಕಾಶ ನೀಡಲಿಲ್ಲ.
2 ಲಕ್ಷ ರೂ ಗೆ ಬಿಡ್ಡ ದರ ಇಳಿಸಿ 2.6 ಲಕ್ಷ ರೂ ಗೆ ಖಾಯಂ ಗೊಳಿಸಿದರು. ಇಲ್ಲಿ ಆರಂಭದಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಅವಕಾಶ ನೀಡಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಬಾರಿ ಇದೇ ಹಸಿ ಮೀನು ಮಾರುಕಟ್ಟೆಗೆ ಏಲಂ ಪ್ರಕ್ರಿಯೆ ನಡೆಸುವಾಗ ಐದು ಲಕ್ಷ ರೂ ಗೆ ಆರಂಭಿಕ ಮೊತ್ತ ನಿಗದಿಪಡಿಸಲಾಗಿತ್ತು. ಇದಕ್ಕೆ ಯಾರೂ ಸ್ಪಂದಿಸದೇ ಹೋದಾಗ ಪಂಚಾಯಿತಿ ಒಂದು ವಾರ ಕಾಲಾವಕಾಶ ನೀಡಿ ಮರು ಏಲಂ ನಡೆಸಿತ್ತು. ಆದರೆ ಈ ಬಾರಿ ಈ ಪ್ರಕ್ರಿಯೆಗೆ ಅವಕಾಶವೇ ನೀಡಲಿಲ್ಲ.

ಇಲ್ಲಿ ಆರಂಭಿಕ ಬಿಡ್ಡು ಮೊತ್ತವನ್ನು ಕಡಿಮೆ ಮಾಡಿ ತಕ್ಷಣ ಏಲಂ ನಡೆಸಿ ಎಡವಟ್ಟು ಮಾಡಿಕೊಳ್ಳಲಾಗಿದೆ. ಒಮ್ಮೆ ಪ್ರಕಟಣೆ ನೀಡಿ ಏಲಂ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಬೇಕಿದ್ದರೆ ಮತ್ತೆ ಅದಕ್ಕೆ ಕಾಲಾವಕಾಶ ನೀಡಿ ಮರು ಏಲಂ ನಡೆಸಬೇಕೆನ್ನುವುವುದು ನಿಯಮ. ಆದರೆ ಇದ್ಯಾವುದಕ್ಕೂ ಇಲ್ಲಿ ಅವಕಾಶವೇ ಇಲ್ಲ. ಇಲ್ಲಿ ಕಾನೂನು ಮೀರಿ ಏಲಂ ನಡೆಸಲಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಡಬ ತಾಲೂಕು ಹಿಂದೂ ಜಾನಗರಣ ವೇದಿಕೆ ಅಧ್ಯಕ್ಷ ಮಲ್ಲೇಶ್ ಎನ್ ಪ್ರತಿಕ್ರಿಯೆ ನೀಡಿ ಹಸಿ ಮೀನು ಮಾರುಕಟ್ಟೆಯ ಆರಂಭಿಕ ಬಿಡ್ಡನ್ನು ಕಡಿಮೆಗೊಳಿಸಬೇಕು ಎಂದು ಮನವಿ ಮಾಡಿದಾಗ ಅಧಿಕಾರಿಗಳು ಇದು ಅಸಾಧ್ಯ ಈಗಾಗಲೇ ಪತ್ರಿಕಾ ಪ್ರಕಟಣೆಯನ್ನು ನೀಡಿ ಏಲಂ ಪ್ರಕ್ರಿಯಗೆ ಪೂರ್ವ ಸಿದ್ದತೆ ಮಾಡಲಾಗಿದೆ ಬಿಡ್ಡನ್ನು ಯಾವುದೇ ಕಾರಣಕ್ಕೆ ಕಡಿತಗೊಳಿಸಲಾಗುವುದಿಲ್ಲ. ಇ ದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದರು. ಆದರೆ ಪಂ. ನಿಗದಿ ಪಡಿಸಿದ ಆರಂಭಿಕ ಬಿಡ್ಡಿಗೆ ಟೆಂಡರರುದಾರರು ಇಲ್ಲ ಎಂದು ಖಚಿತವಾಗುತ್ತಿದ್ದಂತೆ ತಕ್ಷಣ ಬಿಡ್ಡನ್ನು 2 ಲಕ್ಷಕ್ಕೆ ಇಳಿಸಿ ಏಲಂ ಪ್ರಕ್ರಿಯೆಯನ್ನು ಅಧಿಕಾರಿಗಳು ಮುಗಿಸಿದ್ದಾರೆ.ಇದು ಕಾನೂನು ಬಾಹಿರವಾಗಿದ್ದು ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದಿದ್ದಾರೆ.