




ಕಡಬ ಟೈಮ್ಸ್ (KADABA TIMES):ಸುಳ್ಯದ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕಿನ ಮೂಲಕ ಪ್ರಶ್ನಿಸಿ ಕೊರೋನಾ ಕುರಿತ ಜಿಲ್ಲೆಯ ಸಮಗ್ರ ವಿವರ ಪಡೆದುಕೊಂಡಿದ್ದಾರೆ.

ಮಾಹಿತಿ ಹಕ್ಕಿನ ಮೂಲಕ ಪ್ರಶ್ನಿಸಿದ ಡಿ.ಎಂ.ಶಾರಿಕ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಪ್ರಿಲ್ 1 ರಿಂದ ಜುಲೈ 31 ರವರೆಗೆ ಕೊರೋನಾ ದೃಢಪಟ್ಟ ವ್ಯಕ್ತಿಗಳ ವಿವರ, ಮೃತಪಟ್ಟವರ ವಿವರ, ಕೊರೋನಾ ನಿಯಂತ್ರಣಕ್ಕೆ ಬಳಸಿಕೊಳ್ಳುವ ವಿಧಾನ ಹಾಗೂ ಸರಕಾರದಿಂದ ಈವರೆಗೆ ಕೊರೋನಾ ನಿಯಂತ್ರಣಕ್ಕೆ ಬಿಡುಗಡೆಯಾದ ಮೊತ್ತ ಮತ್ತು ಬಳಸಿಕೊಂಡ ಮೊತ್ತದ ದಾಖಲೆಗಳ ದೃಢೀಕರಣ ಪ್ರತಿ ನಿಡುವಂತೆ ವಿನಂತಿಸಿದ್ದರು.
ಅದರಂತೆ ಮಾರ್ಚ್ನಿಂದ ಜುಲೈವರೆಗೆ ಜಿಲ್ಲೆಯಲ್ಲಿ 5705 ಕೊರೋನಾ ಸೋಂಕಿತರಿದ್ದು, ಈ ಅವಧಿಯಲ್ಲಿ 162 ಮಂದಿ ಸಾವನ್ನಪ್ಪಿದ್ದಾರೆ ಎಂಬ ಉತ್ತರ ದೊರೆತಿದೆ. ಆರ್ಟಿ ಪಿಸಿಆರ್ ಮತ್ತು ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯ ವಿಧಾನಗಳನ್ನು ಅಳವಡಿಸಲಾಗಿದೆ ಎಂಬ ಉತ್ತರ ದೊರೆತಿದ್ದು, ಕೊರೋನಾ ನಿಯಂತ್ರಣಕ್ಕೆ ಬಿಡುಗಡೆಯಾದ ಮೊತ್ತ ಮತ್ತು ಬಳಸಿಕೊಂಡ ಮೊತ್ತಗಳ ದಾಖಲೆ ಈ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕ ಉತ್ತರ ನೀಡಿದೆ.