ಕಡಬ ಪಟ್ಟಣ ಪಂಚಾಯತ್: ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿರುವ ಹಿಂದೂ ರುದ್ರಭೂಮಿ

Kadaba Times News

ಕಡಬ ಟೈಮ್,ಪಟ್ಟಣ ಸುದ್ದಿ:  ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿರುವ ರುದ್ರಭೂಮಿಯಲ್ಲಿ  ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದ್ದು  ಸಾಮಾಜಿಕ ಜಾಲತಾಣದಲ್ಲಿ ಪೊಟೋ ,ವೀಡಿಯೋಗಳು ಹರಿದಾಡಿದೆ.




ಈ ಪೋಟೊಗಳು ವೈರಲ್ ಆಗುತ್ತಿದ್ದಂತೆ  ಸ್ಮಶಾನ ಅಭಿವೃದ್ದಿಗಾಗಿ ಬಿಡುಗಡೆಯಾದ ಅನುದಾನ ಏನಾಯಿತು ಎಂದು ಜನರು ಪ್ರಶ್ನಿಸುತ್ತಿದ್ದಾರೆ.  ಸ್ಮಶಾನದಲ್ಲಿರುವ  ಕಬ್ಬಿಣದ  ಚಿತಾಗಾರ ತುಕ್ಕು ಹಿಡಿದು ಮುರಿಯುವ ಹಂತಕ್ಕೆ ತಲುಪಿದೆ.  ಇನ್ನು ನೀರಿನ ಸಂಪರ್ಕ, ಸಮರ್ಪಕ ವಿದ್ಯುತ್ ಬೆಳಕು, ಸುತ್ತ ಸ್ವಚ್ಚತೆ ಇಲ್ಲದ ಪರಿಸರ ಹೀಗೆ ಅವ್ಯವಸ್ಥೆ ಎದ್ದು ಕಾಣುತ್ತಿದೆ. ರುದ್ರಭೂಮಿಯ ಸಮಗ್ರ ಅಭಿವೃದ್ಧಿಯ ಜತೆಗೆ ವಿದ್ಯುತ್ ಚಿತಾಗಾರ  ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಕೂಗಿಗೆ ಬೆಲೆ ಇಲ್ಲದಂತಾಗಿದೆ.



ಕಡಬ-ಪಂಜ ರಸ್ತೆಯ ಪಕ್ಕದಲ್ಲಿ ಸ.ನಂ. 306/1ಎ1 ಯಲ್ಲಿ 1.03 ಎಕರೆ ಭೂಮಿ ರುದ್ರಭೂಮಿಗಾಗಿ  ಕಾದಿರಿಸಲಾಗಿದೆ. ಕಡಬ ಆಸುಪಾಸಿನ ಗ್ರಾಮಗಳಲ್ಲಿಯೂ ಸಾರ್ವಜನಿಕ ರುದ್ರಭೂಮಿಗಳು ಇಲ್ಲದೇ ಇರುವುದರಿಂದ ಜನರು ಅಂತ್ಯಸಂಸ್ಕಾರಕ್ಕಾಗಿ ಕಡಬದ ರುದ್ರಭೂಮಿಯನ್ನು ಅವಲಂಭಿ ಸಿದ್ದಾರೆ. ಪ್ರಸ್ತುತ ಕಡಬ ಪಟ್ಟಣ ಪಂಚಾಯತ್ ಸುಪರ್ದಿಯಲ್ಲಿರುವ  ಹಿಂದೂ ರುದ್ರಭೂಮಿಯ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾದರೂ ಬಳಕೆಯಾಗದಿರಲು ಕಾರಣ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


ಒಟ್ಟು 22.40 ಲಕ್ಷ ರೂ ಗಳ  ಪೈಕಿ ಸುಮಾರು 10 ಲಕ್ಷ ರೂ. ಅನುದಾನ ಈ ಹಿಂದೆ ಗ್ರಾ.ಪಂ. ಆಡಳಿತದ ಅವಧಿಯಲ್ಲಿ ಬಳಕೆಯಾಗಿರುವ ಬಗ್ಗೆ ಅಂದಿನ ಪ.ಪಂ ಮುಖ್ಯಾಧಿಕಾರಿ ತಿಳಿಸಿದ್ದರು. ಅಲ್ಲದೆ   ಚಿತಾಗಾರದ ಛಾವಣಿಗೆ ಲೋಹದ ಶೀಟ್ ಅಳವಡಿಕೆ  (2 ಲಕ್ಷ ರೂ.), ಶವ ದಹನ ನಡೆಸುವ ಲೋಹದ ಕ್ರಿಮೆಟೋರಿಯಂ ಅಳವಡಿಕೆ, ಚಿತಾಗಾರದ ಸುತ್ತ ಲೋಹದ ತಡೆಬೇಲಿ ಹಾಗೂ ನೆಲಹಾಸು ಕಾಮಗಾರಿ (4 ಲಕ್ಷ ರೂ.), ಶ್ಮಶಾನವನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಕ್ರೀಟ್ ಹಾಕಿ ಅಭಿವೃದ್ಧಿಪಡಿಸುವ ಕಾಮಗಾರಿ (4 ಲಕ್ಷ ರೂ.) ಪೂರ್ಣಗೊಳಿಸಲಾಗಿತ್ತು.


ಇನ್ನುಳಿದಂತೆ ಶ್ಮಶಾನಕ್ಕೆ ಹೈಮಾಸ್ಟ್ ದೀಪ ಅಳವಡಿಕೆ (1 ಲಕ್ಷ ರೂ.), ಉದ್ಯಾನವನ ನಿರ್ಮಾಣ (3.40 ಲಕ್ಷ ರೂ.), ಚಿತಾಗಾರ ಅಭಿವೃದ್ಧಿ (4 ಲಕ್ಷ ರೂ.) ಹಾಗೂ ಚಿತಾಗಾರಕ್ಕೆ ಇಂಟರ್ಲಾಕ್ ಅಳವಡಿಕೆ (4 ಲಕ್ಷ ರೂ.) ಕಾರ್ಯ  ಬಾಕಿ ಇರುವುದಾಗಿ ಅಂದಿನ ಪ.ಪಂ ಮುಖ್ಯಾಧಿಕಾರಿ ಫಕೀರ ಮೂಲ್ಯ ಮಾಧ್ಯಮಗಳಿಗೆ ತಿಳಿಸಿದ್ದರು. 



ಸ್ಮಶಾನದ ಪಕ್ಕದಲ್ಲೇ ಮಣ್ಣಿನಿಂದ ಗೋರಿ ನಿರ್ಮಾಣ: ಸ್ಮಶಾನದ ಬಳಿ ಇರುವ ಖಾಲಿ ಜಾಗದಲ್ಲಿ ಯಾರೋ ಮಣ್ಣಿನಿಂದ ಗೋರಿ ನಿರ್ಮಿಸಿ ಅದಕ್ಕೆ ಗಿಡದ ಗೆಲ್ಲುಗಳನ್ನು ಇಡಲಾಗಿದೆ. ಈ ರೀತಿ ಗೋರಿ ನಿರ್ಮಾಣ ಮಾಡಲು ಅವಕಾಶ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. 



ಈ ಬಗ್ಗೆ ಸಾಮಾಜಿಕ ಮುಂದಾಳು ರಾಘವ ಕಳಾರ ಮಾತನಾಡಿ ಸ್ಮಶಾನದ ಸುತ್ತ ಸುಚಿತ್ವ ಅಗತ್ಯವಾಗಿದೆ, ನೀರಿನ ಸಂಪರ್ಕವೂ ಅಗತ್ಯವಾಗಿ ಬೇಕಾಗಿದೆ. ಪ.ಪಂ ಕೂಡಲೇ ಕ್ರಮ ಕೈಗೊಳ್ಳಬೇಕು.  ಅನುದಾನ ಸಮರ್ಪಕ  ಬಳಕೆಯಾಗದೆ ಇದ್ದಲ್ಲಿ   ಸಮರ್ಪಕ ದಾಖಲೆಯೊಂದಿಗೆ ಜಿಲ್ಲಾಧಿಕಾರಿಗೆ ಮತ್ತು  ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದಿದ್ದಾರೆ.


ಪ.ಪಂ ಮುಖ್ಯಾಧಿಕಾರಿ ಏನಂದ್ರು:    ಈ ಬಗ್ಗೆ ಕಡಬ ಟೈಮ್ ಜೊತೆ ಮಾತನಾಡಿದ  ಕಡಬ ಪ.ಪಂ ಮುಖ್ಯಾಧಿಕಾರಿ ಲೀಲಾವತಿಯವರು  ಹಿಂದೂ  ರುದ್ರಭೂಮಿಯನ್ನು  ಹಂತ ಹಂತವಾಗಿ ಅಭಿವೃದ್ದಿ ಪಡಿಸುವ ಕೆಲಸ ನಡೆಯಲಿದೆ.  ನೀರಿನ ವ್ಯವಸ್ಥೆ, ದೀಪದ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತಿದೆ.  ಸುಮಾರು ಏಳು ಲಕ್ಷ ರೂ ವೆಚ್ಚದ ಕಾಮಗಾರಿಗಳು ನಡೆದಿದೆ . ಅನುದಾನದ ಬಂದಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top