



ಕಡಬ ಟೈಮ್, ಪಟ್ಟಣ ಸುದ್ದಿ: ಇಲ್ಲಿನ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ವತಿಯಿಂದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಸಂಸ್ಥೆಯ ಆವರಣದಲ್ಲಿ ನಡೆಯಿತು. ಭಾರತೀಯ ಸೇನೆಯ ನಿವೃತ್ತ ಸಿ ಆರ್ ಪಿ ಎಫ್ ಶ್ರೀಮತಿ ಅನಿತಾ ಎಸ್ ಧ್ವಜಾರೋಹಣಗೈದರು.
ಈ ವೇಳೆ ಮಾತನಾಡಿದ ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವುದು ಆಧುನಿಕ ಭಾರತದಲ್ಲಿ ಅತಿ ಅಗತ್ಯವೆನಿಸಿದೆ; ಜಾತಿ ,ಧರ್ಮ,'ರಾಜಕೀಯ ಕಲಹಗಳು ಸೂಕ್ಷ್ಮ ಸಂಗತಿಗಳಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ವಿವಿಧತೆಯಲ್ಲಿ ಏಕತೆ, ಸಮಾನತೆ, ಸೋದರತೆ, ಸಮನ್ವಯತೆಯನ್ನು ಸಾಧಿಸುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ. ಪ್ರಕಾಶ್ ಪಾವ್ಲ್ ಡಿ'ಸೋಜ ರವರು ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಲು ವಿದ್ಯಾರ್ಥಿಗಳು ಸಂವಿಧಾನ ಸೂಚಿಸಿದ ಮಾರ್ಗಗಳನ್ನು ಅನುಸರಿಸಬೇಕೆಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ನಂತರ ವಿದ್ಯಾರ್ಥಿ ನಾಯಕ ಮನ್ವಿತ್ ಕೆ ಅವರು ಸಂವಿಧಾನದ ಪೀಠಿಕೆಯ ವಾಚಸಿದರು. ವಿದ್ಯಾರ್ಥಿಗಳಿಂದ ಕವಾಯತು, ದೇಶಭಕ್ತಿ ಬಿಂಬಿಸುವ ನೃತ್ಯ ,ಸಮೂಹ ಗಾಯನ ನೆರವೇರಿತು.
ವೇದಿಕೆಯಲ್ಲಿ ಧರ್ಮ ಗುರುಗಳಾದ ವಂ.ಜೋಸೆಫ್ ರೋಡ್ರಿಗಸ್, ಸೈಂಟ್ ಜೋಕಿಮ್ಸ್ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆಸಿಂತಾ ವೇಗಸ್, ರಕ್ಷಕ- ಶಿಕ್ಷಕ ಸಮಿತಿಯ ಉಪಾಧ್ಯಕ್ಷರಾದ ಈಶ್ವರ ಕೆ, ವಿದ್ಯಾ ಸಂಸ್ಥೆಗಳ ಮುಖ್ಯಸ್ಥರುಗಳಾದ ವಂ. ಅಮಿತ್ ಪ್ರಕಾಶ್ ರೋಡ್ರಿಗಸ್, ಕಿರಣ್ ಕುಮಾರ್, ಶ್ರೀಲತಾ ,ಸಿಸ್ಟರ್ ಹಿಲ್ಡಾ ರೋಡ್ರಿಗಸ್ ಹಾಗೂ ದಕ್ಷಾ ಉಪಸ್ಥಿತರಿದ್ದರು.
ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲಾ ಶಿಕ್ಷಕಿ ಸಫ್ರೀನ್ , ಪ್ರೌಢಶಾಲಾ ವಿದ್ಯಾರ್ಥಿನಿ ಶಿಫಾ, ಸೈಂಟ್ ಆನ್ಸ್ ಶಾಲಾ ಶಿಕ್ಷಕಿ ಭವಾನಿ ಕಾರ್ಯಕ್ರಮ ನಿರ್ವಹಿಸಿದರು.