




ಕಡಬ ಟೈಮ್ಸ್, ಮಂಗಳೂರು :ಭೂಗತ ಪಾತಕಿ ರವಿ ಪೂಜಾರಿಯ ಸಹಚರರಲ್ಲಿ ಒಬ್ಬರನ್ನು ಕೊಲ್ಲಲು ಸ್ಕೆಚ್ ಹಾಕಿಕೊಂಡಿದ್ದ, ದರೋಡೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ನಾಲ್ವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.
ಕುಲಶೇಖರದ ದೀಕ್ಷಿತ್ ಪೂಜಾರಿ ,ಸೋಮೇಶ್ವರದ ಚಂದ್ರಹಾಸ ಪೂಜಾರಿ ,ಕೋಟೆಕಾರ್ ನ ಪ್ರಜ್ವಲ್ ಮತ್ತು ಚೇಳಾರ್ ನ ಸಂತೋಷ್ ಪೂಜಾರಿ ಯಾನೆ ನಾಯಿ ಸಂತು ಎಂಬ ಆರೋಪಿಗಳು ಬಂಧಿತರು.

ನಗರದ ಕುಲಶೇಖರದಲ್ಲಿ ಮಾ.17ರಂದು 3 ರಿಂದ ನಾಲ್ಕು ಅಪರಿಚತರು ಸ್ಕೂಟರ್ ಸವಾರರನ್ನು ಅಡ್ಡಗಟ್ಟಿ ಚೂರಿ ತೋರಿಸಿ ಸುಲಿಗೆ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ ವೇಳೆ ಈ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ನಾಲ್ವರೂ ರೌಡಿ ಶೀಟರ್ ಗಳಾಗಿದ್ದು, ದೀಕ್ಷಿತ್ ಮೇಲೆ ಈಗಾಗಲೇ 12 ಪ್ರಕರಣಗಳು, ಚಂದ್ರಹಾಸನ ವಿರುದ್ಧ 7 ಪ್ರಕರಣಗಳು, ಪ್ರಜ್ವಲ್ ವಿರುದ್ಧ 9 ಪ್ರಕರಣಗಳು ಮತ್ತು ಸಂತೋಷ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದೆ.
ಈ ಆರೋಪಿಗಳು ದೊಡ್ಡ ಗ್ಯಾಂಗ್ ಕಟ್ಟಿಕೊಂಡು ಎದುರಾಳಿಗಳಾದ ಪ್ರದೀಪ್ ಮೆಂಡನ್, ಮಂಕಿಸ್ಟಾಂಡ್ ವಿಜಯನ ಗ್ಯಾಂಗ್ ನವರನ್ನು ಗುರಿಯಾಗಿಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ತಮ್ಮ ಸಂಚು ಸಾಧನೆಗಾಗಿ ಹಣದ ಅವಶ್ಯಕತೆ ಇರುವ ಕಾರಣ ತಡರಾತ್ರಿ ಸಂಚಾರ ಮಾಡುವವರನ್ನು ಮತ್ತು ಶ್ರೀಮಂತರನ್ನು ದರೋಡೆ ಮಾಡುತ್ತಿದ್ದರು. ಇದರಂತೆ ಕುಲಶೇಖರ ಮತ್ತು ನೀರುಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದರು. ಸದ್ಯ ಆರೋಪಿಗಳಿಂದ ದರೋಡೆ ಮಾಡಿದ ಎರಡು ದ್ವಿಚಕ್ರ ವಾಹನ, ಹಣ, ಮೊಬೈಲ್ ಫೋನ್ ಚಾರ್ಜರ್ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಲಾಗಿದೆ.ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ಭಾಗಿಯಾಗಿದ್ದರು.