




ಕಡಬ ಟೈಮ್ಸ್, ಪಟ್ಟಣ ಸುದ್ದಿ : 1931 ರಲ್ಲಿ ಬ್ರಿಟಿಷ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್ಗುರು ಮತ್ತು ಸುಖದೇವ್ ಅವರಿಗೆ ಗೌರವ ಸಲ್ಲಿಸಲು ಮಾರ್ಚ್ 23 ಅನ್ನು ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ತ್ರಿವಳಿ ದೇಶಭಕ್ತರ ಬಲಿದಾನದ ಸ್ಮರಣೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ಕಡಬದಲ್ಲಿ ಮಾ .೨೩ರಂದು ಸಂಜೆ ಪಂಜಿನ ಮೆರವಣಿಗೆ ನಡೆಯಿತು. ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಿಂದ ಹೊರಟ ಪಂಜಿನ ಮೆರವಣಿಗೆ ಅನುಗ್ರಹ ಹಾಲ್ ತನಕ ಸಾಗಿ ಅಲ್ಲಿದ್ದ ಮುಖ್ಯ ಪೇಟೆಯವರೆಗೆ ಸಾಗಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸುಳ್ಯ ನ.ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ ಮೂರು ಮಂದಿ ದೇಶ ಭಕ್ತರು ಯುವ ಸಮಾಜದ ಪ್ರೇರಣಾ ಶಕ್ತಿಗಳು. ಅವರ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶದ ದಿಕ್ಕನ್ನೇ ಬದಲಾಯಿಸಿದೆ. ಇವರು ಯುವ ಸಮಾಜಕ್ಕೆ ಮರೆಯಲಾಗದ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳನ್ನು ಯುವ ಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬಿಜಿಪಿ ಮುಖಂಡ ಕೃಷ್ಣ ಶೆಟ್ಟಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗುರುದತ್ ನಾಯಕ್, ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ಅಧ್ಯಕ್ಷ ಕೃಷ್ಣ ಎಂ ಆರ್ ಉಪಸ್ಥಿತರಿದ್ದರು.