ಹೆರಿಗೆಯ ನಂತರ ಮಹಿಳೆ ಮೃತಪಟ್ಟ ಪ್ರಕರಣ : ದೂರುದಾರರಿಗೆ ಪುತ್ತೂರಿನ ಹೆಲ್ತ್ ಸೆಂಟರ್ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ

ಹೆರಿಗೆಯ ನಂತರ ಮಹಿಳೆ ಮೃತಪಟ್ಟ ಪ್ರಕರಣ : ದೂರುದಾರರಿಗೆ ಪುತ್ತೂರಿನ ಹೆಲ್ತ್ ಸೆಂಟರ್ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ

Kadaba Times News

 ಕಡಬ ಟೈಮ್ಸ್ (KADABA TIMES) : ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ವೈದ್ಯರಿಂದ ಮತ್ತು ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವಾನ್ಯೂನ್ಯತೆ ಸಂಭವಿಸಿದೆ ಎಂದು ದ.ಕ.ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದ್ದು,  ದೂರುದಾರರಿಗೆ ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದೆ. ಅದೇ ರೀತಿ ವ್ಯಾಜ್ಯ ವೆಚ್ಚವಾಗಿ ರೂ.30,೦೦೦ ನೀಡುವಂತೆ ಆದೇಶ ನೀಡಿದೆ. 10 ಲಕ್ಷದ ಮೊತ್ತದ ಜೊತೆಗೆ ಶೇ.6 ಬಡ್ಡಿಯನ್ನು ಪ್ರಕರಣ ದಾಖಲಾತಿ ಸಮಯದಿಂದ ವಸೂಲಾಗುವವರೆಗೆ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿದೆ.  



ಕೆಮ್ಮಿಂಜೆ ಗ್ರಾಮದ ಮುಂಡೂರು ನಿವಾಸಿ ಗಣೇಶ್ ಬಂಗೇರ ಅವರು ದೂರುದಾರರು.   ಪತ್ನಿ ಶ್ವೇತಾ ಯಾನೆ ಶಾಂತ ಕುಮಾರಿ ಅವರು 2011ರ ಮಾ.29ರಂದು ಹೆರಿಗೆಗಾಗಿ  ಪುತ್ತೂರು ದರ್ಬೆಯಲ್ಲಿನ  ಹೆಲ್ತ್ ಸೆಂಟರ್‌ಗೆ ದಾಖಲಾಗಿದ್ದರು. 2011ರ ಮಾ.30ರಂದು ಅವರು ಗಂಡು ಮಗುವಿಗೆ ಜನ್ಮತಾಳುವ ವೇಳೆ ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದರು.  ವೈದ್ಯರ ಮತ್ತು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಪತ್ನಿ ಮೃತಪಟ್ಟಿದ್ದಾರೆಂದು ಆರೋಪಿಸಿ 2014ರ ನ.7ರಂದು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ಆದರೆ 2017ರಂದು ಜಿಲ್ಲಾ ಗ್ರಾಹಕರ ನ್ಯಾಯಾಲಯ ಪ್ರಕರಣವನ್ನು ವಜಾ ಮಾಡಿತ್ತು.  ಈ ಕುರಿತು ಮೃತರ ಪತಿ ಗಣೇಶ್ ಬಂಗೇರ ಅವರು ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದರು.


ರಾಜ್ಯ ಗ್ರಾಹಕ ನ್ಯಾಯಾಲಯ 2022ರ ಮಾ.28ರಂದು ಪ್ರಕರಣವನ್ನು ಮುರು ವಿಚಾರಣೆ ನಡೆಸಬೇಕೆಂದು ಆದೇಶ ನೀಡಿತ್ತು. ಮರು ವಿಚಾರಣೆಗೆ ಆದೇಶವಾದ ನಂತರ ದೂರುದಾರರು ಈ ಪ್ರಕರಣದ ವಕಾಲತನ್ನು ಪುತ್ತೂರಿನ ನ್ಯಾಯವಾದಿಗಳಾದ ಹರೀಶ್ ಕುಮಾರ್ ಬಳಕ್ಕ ಮತ್ತು ದೀಪಕ್ ಬೊಳುವಾರುರವರಿಗೆ ವಹಿಸಿದ್ದರು. 2022ರ ನಂತರ ಈ ಪ್ರಕರಣದ ಮರು ವಿಚಾರಣೆ ದ.ಕ.ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಆರಂಭವಾಗಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.

ಗರ್ಭಿಣಿಯನ್ನು ಹೆರಿಗೆ ಕೋಣೆಗೆ ಕಳುಹಿಸುವ ಮೊದಲು ಎಲ್ಲಾ ವ್ಯವಸ್ಥೆಗಳನ್ನು ಹೊಂದಿರಬೇಕಾದದ್ದು ವೈದ್ಯೆಯ ಕರ್ತವ್ಯ. ಹೆರಿಗೆ ಕೊಠಡಿಯಲ್ಲಿ ರಕ್ತ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಹೆರಿಗೆ ಪೂರ್ವ ಹೊಂದಿರತಕ್ಕದ್ದು ಆದರೆ ಈ ಪ್ರಕರಣದಲ್ಲಿ ಹೆರಿಗೆ ನಂತರ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ವೈದ್ಯೆ ಸಂಪೂರ್ಣ ವಿಫಲವಾಗಿದ್ದಾರೆ.  ಈ ಮೂಲಕ ಜೀವ ಉಳಿಸುವ ಬಹು ಮುಖ್ಯ ತುರ್ತು ಸಮಯ (ಗೋಲ್ಡನ್ ಪಿರೇಡ್) ದಲ್ಲಿ ಸೂಕ್ತ ವ್ಯವಸ್ಥೆಯ ಕೊರತೆ ಕಂಡು ಬರುತ್ತದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.


ಒಬ್ಬ ಜವಾಬ್ದಾರಿಯುತ ವೈದ್ಯ ತುರ್ತು ಸಮಯದಲ್ಲಿ ರಕ್ತ, ಆಮ್ಲಜನಕದಂತಹ ಅವಶ್ಯಕತೆಗಳ ವಿಷಯದಲ್ಲಿ ಹೊಂದಬೇಕಾದ ಮುಂಜಾಗರೂಕತೆ ಈ ಪ್ರಕರಣದಲ್ಲಿ ವಿಫಲವಾಗಿದೆ. ಸದ್ರಿ ರೋಗಿಗೆ ಸಂಬಂಧಿಸಿದ ಕೇಸ್ ಶೀಟ್ ಎಲ್ಲ ವ್ಯವಸ್ಥೆ ಸಮರ್ಪಕವಾಗಿರುವುದನ್ನು ತೋರಿಸುವುದರಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅದೇ ರೀತಿ ಮಂಗಳೂರಿಗೆ ಶಿಫ್ಟ್ ಮಾಡುವಾಗ ಬರವಣಿಗೆ ಅಥವಾ ಮೌಖಿಕ ಒಪ್ಪಿಗೆ ಪಡೆಯದಿರುವುದು ಕೂಡ ಈ ಪ್ರಕರಣದಲ್ಲಿ ಕಂಡುಬರುತ್ತದೆ.  ಅದೇ ರೀತಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಕಾಯಿದೆಯಂತೆ 72 ಗಂಟೆಯೊಳಗೆ ಕೇಸ್ ಶೀಟ್ ಡಿಸ್ಚಾರ್ಜ್ ಸಮ್ಮರಿಗಳನ್ನು ದೂರುದಾರರಿಗೆ ಆಸ್ಪತ್ರೆ ಒದಗಿಸದೆ ವೃತ್ತಿ ನಿಯಮಗಳನ್ನು ಉಲ್ಲಂಸಲಾಗಿದೆ ಎಂದು ತೀರ್ಪು ನೀಡಿದೆ. ದೂರುದಾರರ ಪರವಾಗಿ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಭುವನೇಶ್ವರಿ ಎಮ್, ಪಿ.ವಿಷೀಕಾ ವಾದಿಸಿದರು.

45 ದಿನದೊಳಗೆ ಪರಿಹಾರ ನೀಡಬೇಕು : ದೂರುದಾರರಿಗೆ ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಅದೇ ರೀತಿ ವ್ಯಾಜ್ಯ ವೆಚ್ಚವಾಗಿ ರೂ.30ಸಾವಿರ ನೀಡಬೇಕು. ರೂ.10 ಲಕ್ಷ ಮೊತ್ತದ ಜೊತೆಗೆ ಶೇ.6ಬಡ್ಡಿಯನ್ನು ಪ್ರಕರಣ ದಾಖಲಾತಿ ಸಮಯದಿಂದ ವಸೂಲಾಗುವವರೆಗೆ ನೀಡಬೇಕು. 45 ದಿವಸದೊಳಗೆ ಪರಿಹಾರ ನೀಡದಿದ್ದರೆ ಶೇ.8 ಬಡ್ಡಿಯಂತೆ ಪರಿಹಾರ ನೀಡತಕ್ಕದು. 45 ದಿನದೊಳಗೆ ಪರಿಹಾರ ನೀಡದಿದ್ದರೆ ವಸೂಲಾತಿಗಾಗಿ ಸೂಕ್ತ ಕ್ರಿಮಿನಲ್ ಅಥವಾ ಸಿವಿಲ್ ವ್ಯವಹರಣೆಯನ್ನು ಆರಂಭಿಸಬಹುದು ಎಂದು ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top