




ಕಡಬ ಟೈಮ್ಸ್, ನೆಲ್ಯಾಡಿ: ತಾಲೂಕು ಕೇಂದ್ರವಾಗಿರುವ ಕಡಬಕ್ಕೆ ಸಂಪರ್ಕಿಸಲು ವಾಣಿಜ್ಯ ಕೇಂದ್ರ ನೆಲ್ಯಾಡಿಗೆ ಸಿಟಿ ಸರ್ಕಾರಿ ಬಸ್ ಆರಂಭಗೊಂಡಿದ್ದು ನೆಲ್ಯಾಡಿಯ ಜನತೆ ಭವ್ಯ ಸ್ವಾಗತ ಕೋರಿದ್ದಾರೆ.
ನೆಲ್ಯಾಡಿಯಿಂದ ಕಡಬಕ್ಕೆ ಹೊರಡುವ ಬಸ್ ಗೆ ಬಾಳೆಗಿಡ, ಹೂವಿನ ಅಲಂಕಾರ ಮಾಡಿ ನೆಲ್ಯಾಡಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ಈ ವೇಳೆ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ ಕಡಬ-ನೆಲ್ಯಾಡಿ ನಡುವೆ ಸಿಟಿ ಬಸ್ ಓಡಾಟ ಆರಂಭಿಸುವಂತೆ ಸಂಬಂಧಿದ ಇಲಾಖೆಗೆ ಮನವಿ ಮಾಡಲಾಗಿತ್ತು. ಇದಕ್ಕೆ ಈಗ ಸ್ಪಂದನೆ ಸಿಕ್ಕಿದ್ದು ಬಸ್ ಓಡಾಟಕ್ಕೆ ಕ್ರಮ ಕೈಗೊಂಡಿರುವ ಕೆಎಸ್ಆರ್ಟಿಸಿ ಇಲಾಖೆಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕಡಬ ತಾಲೂಕಿಗೆ ಒಳಪಟ್ಟ ಗೋಳಿತ್ತೊಟ್ಟು, ಆಲಂತಾಯ, ಕೊಣಾಲು, ನೆಲ್ಯಾಡಿ, ಕೌಕ್ರಾಡಿ, ಶಿರಾಡಿ ಗ್ರಾಮಗಳ ಜನರು ನೆಲ್ಯಾಡಿಯಿಂದ ಬಾಡಿಗೆ ವಾಹನ ಗೊತ್ತುಪಡಿಸಿ ಕಡಬಕ್ಕೆ ಹೋಗಬೇಕಾಗಿತ್ತು. ಇಲ್ಲವೇ ನೆಲ್ಯಾಡಿಯಿಂದ ಉಪ್ಪಿನಂಗಡಿಗೆ ಬಂದು ಕಡಬಕ್ಕೆ ಪ್ರಯಾಣಿಸಬೇಕಾಗಿತ್ತು ಅಥವಾ ನೆಲ್ಯಾಡಿಯಿಂದ ಕಡಬ ನಡುವೆ ಸರ್ವೀಸ್ ಮಾಡುವ ಜೀಪುಗಳನ್ನೇ ಅವಲಂಭಿಸಬೇಕಾಗಿತ್ತು. ಇದರಿಂದಾಗಿ ಜನರ ಸಮಯವೂ ವ್ಯರ್ಥವಾಗುತ್ತಿತ್ತು. ದುಬಾರಿ ವೆಚ್ಚವೂ ಮಾಡಬೇಕಾಗಿತ್ತು.

ನೆಲ್ಯಾಡಿಯಿಂದ ಬೆಳಿಗ್ಗೆ ೯ ಗಂಟೆಗೆ ಹೊರಡುವ ಬಸ್ ಪಡುಬೆಟ್ಟು, ಕುರುಬರಕೇರಿ, ಬಲ್ಯ ಮಾರ್ಗವಾಗಿ ಸಂಚರಿಸಲಿದ್ದು ೩೦-೪೦ ನಿಮಿಷದೊಳಗೆ ಕಡಬಕ್ಕೆ ತಲುಪಲಿದೆ. ಅಲ್ಲಿಂದ ೧೦ ಗಂಟೆಗೆ ಮತ್ತೆ ಅದೇ ಮಾರ್ಗವಾಗಿ ನೆಲ್ಯಾಡಿಗೆ ಬರಲಿದ್ದು ನೆಲ್ಯಾಡಿಯಿಂದ ೧೧ ಗಂಟೆಗೆ ಮತ್ತೆ ಕಡಬಕ್ಕೆ ಓಡಾಟ ನಡೆಸಲಿದೆ. ನೆಲ್ಯಾಡಿಯಿಂದ ೨ ಗಂಟೆಗೊಮ್ಮೆ ಈ ಬಸ್ಸು ಓಡಾಟ ನಡೆಸಲಿದ್ದು ದಿನದಲ್ಲಿ ೫ ಬಾರಿ ನೆಲ್ಯಾಡಿಯಿಂದ ಕಡಬಕ್ಕೆ ಬಸ್ಸು ಓಡಾಟ ನಡೆಸಲಿದೆ. ನೆಲ್ಯಾಡಿ ಪೇಟೆಯಿಂದಲೇ ಬಸ್ಸು ಹೊರಡಲಿದ್ದು ಪಡುಬೆಟ್ಟು, ರಾಮನಗರ, ಬಲ್ಯ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.
ತಾ.ಪಂ.ಸದಸ್ಯೆಯರಾದ ಉಷಾ ಅಂಚನ್, ಕೆ.ಟಿ.ವಲ್ಸಮ್ಮ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಯಾಕೂಬ್ ಸಲಾಂ ಪಡುಬೆಟ್ಟು, ಮಾಜಿ ಸದಸ್ಯ ಕೆ.ಪಿ.ಅಬ್ರಹಾಂ, ಕೌಕ್ರಾಡಿ ಗ್ರಾ.ಪಂ.ಸದಸ್ಯ ಕೆ.ಎಂ.ಹನೀಫ್, ಗ್ರಾಮಸ್ಥರಾದ ವರ್ಗೀಸ್ ಅಬ್ರಹಾಂ ಇಚ್ಲಂಪಾಡಿ, ಎನ್.ಅಬ್ದುಲ್ಲಾ ಹಾಜಿ ಶಾಂತಿಬೆಟ್ಟು, ಸಂಚಾರ ನಿಯಂತ್ರಕ ಅಬ್ಬಾಸ್ ಕೋಚಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.